Wednesday, July 25, 2012

ನಾ ಕವಿಯಲ್ಲ

ನಾನೇನು ಬರಿಯೆ ಕಲ್ಲಿನಲ್ಲೂ
ಶಿಲೆಯ ಕಾಣೋ ಕವಿಯೇನಲ್ಲ
ಆದರೂ ಕಂಡ ಕಂಡಲ್ಲೆಲ್ಲಾ
ಕೇವಲ ನಿನ್ನದೇ ಪ್ರತಿರೂಪ!

ಹೊನ್ನನ್ನು ಮಣ್ಣೆಂದು ಬಿಸಾಡೊ
ವೇದಾಂತಿಯೂ ಕೂಡ ನಾನಲ್ಲ
ಆದರೂ ನಿನ್ನೊಲವಿನ ಮುಂದೆ
ಮತ್ತೆಲ್ಲ ತೀರಾನೆ ತೃಣರೂಪ!

ಬದುಕಿಗೆ ಸಕಲವೂ ಒಲವೆಂದೂ
ಗೊಣಗೊ ಆದರ್ಶವೂ ನನಗಿಲ್ಲ
ಆದರೂ ನೀ ದೂರಾದ ನಂತರ
ಕಾಣದಾಗಿದೆ ಬದುಕಿಗೆ ಕಾರಣ!

ಎಂದೆಂದೂ ನನ್ನ ಕಣ್ಣ ಕನ್ನಡಿಯಲಿ
ಮಿನುಗುವ ನಿನ್ನಯ ಪ್ರತಿಬಿಂಬವು
ಇಂದೇಕೋ ಕಣ್ಣೀರಿನಲಿ ಕರಗಿಹೋಗಿ
ಕಣ್ಣನೆ ತೊರೆಯುತಿರುವುದು ಸರಿಯೆ?

ದಿನವಿಡೀ ಮೌನದಲೆ ಜಗಳವಾಡಿ
ಸೊಲ್ಲೆತ್ತದೆ ಸಂಜೆಗೆ ರಾಜಿಯಾಗಿ
ತುಟಿಗಳಲ್ಲೆ ಬರೆದ ಮುಚ್ಚಳಿಕೆಯ
ಮುರಿದು ದೂರಾಗುತಿರುವುದು ಸರಿಯೆ?

ಬಯಸಿಯೆ ಬರಡಾಗಿ ಹೋದರೂ
ಕಡೆಗಣಿಸಿ ಬಲುದೂರ ಸರಿದರೂ
ನೀನೆನ್ನ ಭಾವನದಿಗೆ ಸಾಗರ
ಬತ್ತುವವರೆಗೂ ಹರಿವೆ ನಿನ್ನೆಡೆಗೆ!

No comments:

Post a Comment