Monday, October 25, 2010

ಕನ್ನಡಕೃಷಿ

ಕರುನಾಡ ನಲ್ಮೆಯ ಸಹೋದರರೆಲ್ಲ ಬನ್ನಿರಿ
ಕನ್ನಡಕೃಷಿ ಮಾಡಲು ಕಂಕಣ ಕಟ್ಟಿ ನಿಲ್ಲೋಣ!
ನಮ್ ಹಿರಿಯರು ಕೂಡಿಸಿಟ್ಟ ಸಮೃದ್ದ ಫಸಲ್ ಉಂಡು
ಬರುವ ಪೀಳಿಗೆಗಿನ್ನೂ ಆರೋಗ್ಯ ಬೆಳೆ ಬೆಳೆಯೋಣ!

ಫಲವತ್ತತೆಯ ಆಗರವಾದ ಈ ನಾಡ ಮಣ್ಣಲಿ
ಹಗಲಿರುಳು ಒಲವ ಬೆವರ್ ಸುರಿಸಿ ದುಡಿಯೋಣ
ಕರುನಾಡ ಸರ್ವರೂ ಸುಮತಿವಂತರಾಗಿ
ಕನ್ನಡಮ್ಮನ ಸಿರಿಯ ಪಣತವ ತುಂಬಿಸೋಣ

ಜಾತಿ ಮತಗಳೆಂಬ ನಂಜಿಡುವ ಹೆಮ್ಮರಗಳ
ಬುಡಸಮೇತ ಕಿತ್ತು, ಬೆಂಕಿಯಲಿ ದಹಿಸೋಣ
ಕರುನಾಡ ನೆಲವನು ಹಸನಗೊಳಿಸಿ
ಕನ್ನಡಾಭಿಮಾನದ ಗಟ್ಟಿಬೀಜ ಬಿತ್ತೋಣ

ಪ್ರೀತಿ ನೆಚ್ಚಿಕೆಗಳ ಸಾವಯವ ಗೊಬ್ಬರ ಸುರಿದು
ಭಾವೈಕ್ಯತೆ ಸರ್ವೋದಯಗಳ ನೀರು ಹರಿಸೋಣ
ಅಸ್ಪೃಶ್ಯತೆ ಭ್ರಷ್ಟಾಚಾರಗಳೆಂಬ ಕಳೆ ಕಳೆದು
ಅಸೂಯೆ ಅಜ್ಞಾನಗಳೆಂಬ ಕ್ರಿಮಿ ಕೊಲ್ಲೋಣ

ಕನ್ನಡಮ್ಮನ ಎದೆಯ ಸುಧೆಯುಂಡು ಬೆಳೆದು
ಜಾಗತೀಕರಣದ ಬಿರುಗಾಳಿಗೆ ಸಿಕ್ಕಿ ತೂರಿಹೋದರೂ
ಅಲ್ಲಿಯ ಮಣ್ಣಲ್ಲೂ ಕನ್ನಡ ಕೃಷಿ ಮಾಡಿ
ಜಗದಗಲಕ್ಕೂ ಕನ್ನಡದ ಕಂಪನ್ನು ಪಸರಿಸೋಣ!

ಕೊಯ್ಲು ಮಾಡಿದ ಫಸಲ ಕನ್ನಡಮ್ಮನ ಮುಡಿಗರ್ಪಿಸಿ
ಕನ್ನಡದ ಕಲಿಗಳೆಲ್ಲ ಸೇರಿ ಸುಗ್ಗಿ ಜಾತ್ರೆ ಮಾಡೋಣ
ರಂಗುರಂಗಿನ ಕನ್ನಡ ಪುಷ್ಪಗಳ ಮಕರಂದ ಸವಿದು
ಕನ್ನಡಾಂಬೆಯ ತೇರು ಎಳೆಯಲು ಹೆಗಲು ಕೊಡೋಣ!

Tuesday, October 5, 2010

ಬಾ ಪ್ರೀತಿಯೇ ಬಾ

ಮನದಂಗಳದ ತುಂಬೆಲ್ಲಾ ರಂಗವಲ್ಲಿ ಬಿಡಿಸಿ
ಹೃದಯಂತರಾಳದ ತಲೆಬಾಗಿಲನು ತೆರೆದು
ಬಾಯ್ತುಂಬ ನುಡಿಮುತ್ತಿನ ಹಬ್ಬದಡಿಗೆ ಮಾಡಿ
ಕಣ್ತುಂಬ ಕಾತುರದ ತಳಿರುತೋರಣ ಕಟ್ಟಿ
ಒಲವಿನಾಗಮನದ ದಾರಿಯನ್ನೇ ಎದುರುನೋಡುತ್ತ
ಕಾದಿರುವ ಅಲಂಕಾರಿಕ ಮಂದಿರದ ಆತಿಥ್ಯಕೆ ಬಾ
ಪ್ರೀತಿಯೇ...
ಮಡಿಯಲ್ಲಿರುವ ಈ ಪೂಜಾರಿಯ ನೈವೇದ್ಯಕೆ ಬಾ

ಕೋಗಿಲೆಗೆ ಹಾಡಲು ಹರುಷದ ಹುರುಪು ತುಂಬುವ
ವಸಂತ ಋತುವಾಗಿ ಬಾ
ಇರುಳ ಕೋಣೆಯಲಿ ಕತ್ತಲ ನುಂಗಿ ಬೆಳಕ ಹರಿಸುವ
ಪುಟ್ಟ ಹಣತೆಯಾಗಿ ಬಾ
ಮೂಲೆಯಲಿ ಹಚ್ಚಿದರೂ ನಿವಾಸದ ತುಂಬೆಲ್ಲಾ ಹರಡುವ
ದೂಪದ ಸುಗಂಧವಾಗಿ ಬಾ
ರವಿಯಂತೆ ಬೇಯಿಸದೆ, ದೀಪದಂತೆ ದಹಿಸದೆ, ತಣ್ಣನೆ ಬೆಳಗುವ
ಹುಣ್ಣಿಮೆಯ ಚಂದಿರನಾಗಿ ಬಾ

ಗಾಢ ನಿದಿರೆಯಲಿ ಕರೆಯಿಲ್ಲದೆ ಸುಳಿಯುವ ಅನಿರೀಕ್ಷಿತ
ಕನಸ ಕಾರಂಜಿಯಾಗಿ ಬಾ
ಸಂಕಲನದ ಖಾಲಿ ಹಾಳೆಗಳ ಮೇಲೆ ಮೂಡುವ ಅರ್ಥಗರ್ಭಿತ
ಕಾವ್ಯ ಸಿಂಚನವಾಗಿ ಬಾ
ಕವಿಮನದಲಿ ಹಠಾತ್ ಗೋಚರಿಸುವ ಕಪೋಲಕಲ್ಪಿತ
ಭಾವ ಚಿಲುಮೆಯಾಗಿ ಬಾ
ಅಂತರಂಗವನ್ನೆಲ್ಲಾ ಸೋಸಿ ಸೃಷ್ಟಿಸಿರುವ ಈ ಕವಿತೆಗೆ ಮಾಧುರ್ಯಭರಿತ
ಸಂಗೀತ ಲಹರಿಯಾಗಿ ಬಾ

ಅಂತರಾಳದಲಿ ಅಡಗಿರುವ ತುಂಟ ಆಸೆಯ ಹೊರಗೆಳೆಯಲು
ತುಸು ಧ್ಯೆರ್ಯವಾಗಿ ಬಾ
ಹಸಿಗೋಪದಲಿ ಅಳುವ ಗೆಳತಿಯ ಮುದ್ದು ಮೊಗವರಳಿಸಲು
ಹುಸಿ ನೆವವಾಗಿ ಬಾ
ಬಳಲಿರುವ ಗೆಳತಿ ಬಳಿಬಂದು ಬಳ್ಳಿಯಂತೆ ಬಂದಿಸಿರಲು
ಮೌನದ ಹಾಡಾಗಿ ಬಾ
ಗೆಳತಿಯ ವಿರಹದ ಕಡುಗತ್ತಲೆ ಕವಿಮನವನು ಕವಿದಿರಲು
ನೆನಪಿನ ಹುಣ್ಣಿಮೆಯಾಗಿ ಬಾ

ಇಳೆಯ ತಣಿಸಲು ನೋವು ನೀಡದೆ ಇಳಿದು ಬರುವ
ಸೋನೆ ಮಳೆಯಾಗಿ ಬಾ
ಬೆವರು ಬಸಿದು ತೋಡಿದ ಬಾವಿಯ ತಳದಲಿ ಚಿಮ್ಮುವ
ಒರತೆ ಜಲವಾಗಿ ಬಾ
ಪ್ರತಿರಾತ್ರಿ ಕಂಡ ಸವಿಗನಸುಗಳ ಒಂದೊಂದಾಗಿ ನನಸಾಗಿಸುವ
ಜಾದುಗಾರನ ದಂಡವಾಗಿ ಬಾ
ಒಂದಕ್ಕೆ ಒಂದನ್ನು ಕೂಡಿಸಿದರೆ ಮೂರೆಂದು ನಿರೂಪಿಸುವ
ಶುಭ ಸಂಕಲನವಾಗಿ ಬಾ

[ಈ ಗದ್ದಲದ ಚೌಕಟ್ಟು ಬಿ ಆರ್ ಲಕ್ಷ್ಮಣ್ ರಾವ್ ರವರ "ಬಾ ಮಳೆಯೇ ಬಾ" ಎಂಬ ಸುಂದರ ಕವನದಿಂದ ಪ್ರೆರಿತಗೊಂಡಿದೆ. ಇಲ್ಲಿ ಓದಿ]