ಕರುನಾಡ ನಲ್ಮೆಯ ಸಹೋದರರೆಲ್ಲ ಬನ್ನಿರಿ
ಕನ್ನಡಕೃಷಿ ಮಾಡಲು ಕಂಕಣ ಕಟ್ಟಿ ನಿಲ್ಲೋಣ!
ನಮ್ ಹಿರಿಯರು ಕೂಡಿಸಿಟ್ಟ ಸಮೃದ್ದ ಫಸಲ್ ಉಂಡು
ಬರುವ ಪೀಳಿಗೆಗಿನ್ನೂ ಆರೋಗ್ಯ ಬೆಳೆ ಬೆಳೆಯೋಣ!
ಫಲವತ್ತತೆಯ ಆಗರವಾದ ಈ ನಾಡ ಮಣ್ಣಲಿ
ಹಗಲಿರುಳು ಒಲವ ಬೆವರ್ ಸುರಿಸಿ ದುಡಿಯೋಣ
ಕರುನಾಡ ಸರ್ವರೂ ಸುಮತಿವಂತರಾಗಿ
ಕನ್ನಡಮ್ಮನ ಸಿರಿಯ ಪಣತವ ತುಂಬಿಸೋಣ
ಜಾತಿ ಮತಗಳೆಂಬ ನಂಜಿಡುವ ಹೆಮ್ಮರಗಳ
ಬುಡಸಮೇತ ಕಿತ್ತು, ಬೆಂಕಿಯಲಿ ದಹಿಸೋಣ
ಕರುನಾಡ ನೆಲವನು ಹಸನಗೊಳಿಸಿ
ಕರುನಾಡ ನೆಲವನು ಹಸನಗೊಳಿಸಿ
ಕನ್ನಡಾಭಿಮಾನದ ಗಟ್ಟಿಬೀಜ ಬಿತ್ತೋಣ
ಪ್ರೀತಿ ನೆಚ್ಚಿಕೆಗಳ ಸಾವಯವ ಗೊಬ್ಬರ ಸುರಿದು
ಭಾವೈಕ್ಯತೆ ಸರ್ವೋದಯಗಳ ನೀರು ಹರಿಸೋಣ
ಅಸ್ಪೃಶ್ಯತೆ ಭ್ರಷ್ಟಾಚಾರಗಳೆಂಬ ಕಳೆ ಕಳೆದು
ಅಸೂಯೆ ಅಜ್ಞಾನಗಳೆಂಬ ಕ್ರಿಮಿ ಕೊಲ್ಲೋಣ
ಕನ್ನಡಮ್ಮನ ಎದೆಯ ಸುಧೆಯುಂಡು ಬೆಳೆದು
ಜಾಗತೀಕರಣದ ಬಿರುಗಾಳಿಗೆ ಸಿಕ್ಕಿ ತೂರಿಹೋದರೂ
ಅಲ್ಲಿಯ ಮಣ್ಣಲ್ಲೂ ಕನ್ನಡ ಕೃಷಿ ಮಾಡಿ
ಅಲ್ಲಿಯ ಮಣ್ಣಲ್ಲೂ ಕನ್ನಡ ಕೃಷಿ ಮಾಡಿ
ಜಗದಗಲಕ್ಕೂ ಕನ್ನಡದ ಕಂಪನ್ನು ಪಸರಿಸೋಣ!
ಕೊಯ್ಲು ಮಾಡಿದ ಫಸಲ ಕನ್ನಡಮ್ಮನ ಮುಡಿಗರ್ಪಿಸಿ
ಕನ್ನಡದ ಕಲಿಗಳೆಲ್ಲ ಸೇರಿ ಸುಗ್ಗಿ ಜಾತ್ರೆ ಮಾಡೋಣ
ರಂಗುರಂಗಿನ ಕನ್ನಡ ಪುಷ್ಪಗಳ ಮಕರಂದ ಸವಿದು
ಕನ್ನಡಾಂಬೆಯ ತೇರು ಎಳೆಯಲು ಹೆಗಲು ಕೊಡೋಣ!