Sunday, January 31, 2010

ನಾನೊಬ್ಬ ನಿರಪರಾಧಿ ಗೆಳತಿ

ಸಹ್ಯಾದ್ರಿ ಕಣಿವೆಯ ತಪ್ಪಲಿನಲ್ಲಿ
ಧರೆಯನ್ನೇ ಮಧು ಮಂಚ ಮಾಡಿ
ತಿಂಗಳ ಬೆಳಕಿನ ಉಡುಪಿನಲ್ಲಿ
ನೀಲಿ ಮುಗಿಲಿನ ಚಾದರದಡಿ
ಹಸಿರು ಹುಲ್ಲಿನ ಹಾಸಿಗೆಯ ಮೇಲೆ
ಸೋಲು ಗೆಲುವುಗಳ ಹಂಗಿಲ್ಲದ್ದೆ ಆಡುತಿರುವ
ಆಟ ಇದು, ಪ್ರಣಯದೂಟ ಇದು.

ಸಿರಿಗಂಧ ಮರಗಳ ಸುಗಂಧ
ಗಾಳಿ, ಜಲಪಾತ, ಪಕ್ಷಿಗಳ ಜುಗಲ್ಬಂದಿ ಸಂಗೀತ
ಚಂದಿರನ ಬೆಳಕು, ಮರಗಳ ನೆರಳ್ಗತ್ತಲಿನ ಚಿತ್ತಾರ
ಬೆಂಕಿ ಹುಳಗಳ ದೀಪಾಲಂಕಾರಗಳ
ನಡುವೆ ರೀತಿ ರಿವಾಜುಗಳಿಲ್ಲದೆ ನಡೆಯುತಿರುವ
ಆಟ ಇದು, ರಸ ಕ್ರೀಡೆ ಇದು.

ಮರಗಳು ಬೀಸುತ್ತಿವೆ ಚಾಮರ ದಣಿವಾರಿಸಲು
ಮಂಜಿನ ಹನಿಗಳು ಬೆರೆಯುತ್ತಿವೆ ಬಿಸಿ ಬೆವರಿನೊಂದಿಗೆ
ತನ್ನ ಮುದ್ದು ಮಗ ನೋಡಿ ಹಾಳಾಗಬಾರದೆಂದು,
ಕರಿಮೋಡಗಳ ಪರದೆಯಿಂದ
ಮರೆ ಮಾಡುತಿದ್ದಾಳೆ ಚಂದಿರನ ಅಮ್ಮ
ಪ್ರಕೃತಿ ಮಾತೆಯ ಮಡಿಲಿನಲ್ಲಿ
ಯಾವುದೆ ನೀತಿ ನಿಯಮಗಳಿಲ್ಲದೆ ನಡೆಯುತ್ತಿರುವ
ಆಟ ಇದು, ಕಾಮಣ್ಣ ಆಡಿಸುತ್ತಿರುವ ಬಡಿದಾಟ ಇದು.

ನಮ್ಮ ಯೋಗಭ್ಯಾಸವನ್ನು ಕದ್ದು ನೋಡಿದ
ನವಿಲೊಂದು ಭಾವೋದ್ರೇಕಗೊಂಡು
ಕುಣಿದು, ಕೂಗಿ ಕರೆಯುತ್ತಿದೆ ತನ್ನ ನಲ್ಲೆಯನ್ನು
ನಾಚಿದ ಮೊಲವೊಂದು ಓಡುತಿದೆ
ಜೀವನದಲಿ ಬೇಸತ್ತ ಒಂದು ಇರುವೆ ಮುಕ್ತಿ ಪಡೆಯಲು
ನಮ್ಮ ಬೆನ್ನಿನಡಿ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುತಿದೆ
ಸೋಲು ಗೆಲುವುಗಳಿಲ್ಲದ ಈ ಆಟಕ್ಕೆ ತೀರ್ಪುಗಾರನಾದ
ಗೂಬೆಯೊಂದು ಎವೆಯಿಕ್ಕದೆ ನೋಡುತ್ತಿದೆ
ಇಷ್ಟೆಲ್ಲಾ ಆದರೂ, ಲೋಕದ ಪರಿವೆ ಇಲ್ಲದೆ ನಡೆಯುತಿರುವ
ಆಟ ಇದು, ರಸಿಕರ ಶೃಂಗಾರದಾಟ ಇದು.

ಗೆಳತಿ, ನಿದ್ದೆಯಲಿ ನಾನು ಲೀನವಾಗಿರುವಾಗ
ನಿದಿರಾ ದೇವತೆಯ ಕಟಾಕ್ಷದಿಂದ
ನನ್ನ ಅವತಾರ ಪ್ರವೇಶ ಮಾಡಿ
ರಸಿಕ ಕನಸು ನಿನ್ನೊಂದಿಗೆ ಆಡುತ್ತಿರುವ
ಆಟ ಇದು, ಕನಸಿನ ಆಟ ಇದು.

ನಾನೊಬ್ಬ ನಿರಪರಾಧಿ ಗೆಳತಿ
ನನ್ನ ರೂಪವನ್ನು ಕನಸಿಗೊಪ್ಪಿಸಿ
ಅಶರೀರ ದೃಷ್ಟಿಯಿಂದ, ವಿಧಿಯಿಲ್ಲದೇ
ನೋಡುತ್ತಿರುವ ಮೂಕಪ್ರೇಕ್ಷಕ ನಾನು
ಆದರೆ ದಯಮಾಡಿ ತಿಳಿಸು ಗೆಳತಿ
ನಿನ್ನ ಸಹಕಾರ ಕನಸಿನಲಿ ಮಾತ್ರ ಯಾಕೆ?

Tuesday, January 19, 2010

ಹೊಸ ಕವಿತೆಯ ಪರಿಚಯ

ನಿನ್ನಯ ಪ್ರೀತಿಯ ಉಸಾಬರಿಯೆ
ನನ್ನಯ ಪ್ರತಿನಿತ್ಯದ ಕಸುಬು
ನಿನ್ನಯ ಒಲವಿನ ಭಿಕ್ಷೆಯೆ
ನನ್ನಯ ಜೀತದ ಕೂಲಿ
ನಿನ್ನಯ ಅನುರಾಗದ ಪರಮ್ಮಾನ್ನವೆ
ನನ್ನಯ ಮೂರೊತ್ತಿನ ಕೂಳು

ನೀ ಎದುರಿದ್ದರೆ ನನ್ನ್ನೇ ನಾ ಮರೆವೆ
ನೀ ಮರೆಯಾದರೆ ಕಣ್ತುಂಬ ನೀನೆ ಕಾಣುವೆ
ಹಗಲೆಲ್ಲಾ ಮಾತಾಡುವೆ ಮೌನದಲಿ
ಇರುಳೆಲ್ಲಾ ಪ್ರೀತಿಸುವೆ ಕನಸಿನಲಿ

ಎದೆಯೊಳಗೊಮ್ಮೆ ಅನಿರೀಕ್ಷಿತ ದಾಳಿ ಮಾಡು
ಬಂಧಿಸುವೆ ಕವಿತೆಯೊಳಗೆ
ಮನಸಿನೊಳಗೊಮ್ಮೆ ದಾರಿತಪ್ಪಿ ಭೇಟಿ ನೀಡು
ಕಟ್ಟಿಹಾಕುವೆ ರಾಗದೊಳಗೆ
ಕನಸಿನೊಳಗೊಮ್ಮೆ ಅರಿವಿಲ್ಲದೆ ಇಳಿದು ನೋಡು
ಬಚ್ಚಿಡುವೆ ಚಿತ್ರಪಟದೊಳಗೆ

ನೀ ಮೌನದಲಿ ಮಾತಾಡಲು
ಹೊಸ ಭಾಷೆಯ ಉದಯ
ಕಿವಿಯಲಿ ನೀ ಪಿಸುಗುಡಲು
ಹೊಸ ರಾಗದ ಆರಂಭ
ದಿಟ್ಟಿಸಿ ನೋಡಲು ನೀ
ಹೊಸ ಕವಿತೆಯ ಪರಿಚಯ
ನೀ ಸನಿಹ ಕುಳಿತಿರಲು
ಹೊಸ ಲೋಕದ ಸೃಷ್ಟಿ
ದಿನವಿಡೀ ನೀ ಜೊತೆಗಿರಲು
ದಿನದ ತಾಸುಗಳ ಅಭಾವ

Monday, January 4, 2010

ಹನಿಗವನಗಳು

ಕಾಯಕವೇ ಕೈಲಾಸ
ಎಂದು ನಂಬಿದರೆ ಕೈ ಲಾಸೇ


ಇಂದು ತಡೆದುಕೊಳ್ಳಲಾರದೆ ಚಟ,

ಕುಡಿದರೆ ಸಾರಾಯಿ.

ನಾಳೆ ತಡೆಯಲು ಚಟ್ಟ ,

ಕುಡಿಯಬೇಕಾಗುತ್ತದೆ ದವಾಯಿ

ಕೆಲವರು ದುಡಿಯುತ್ತಾರೆ
ಜಾಬ್ ತೃಪ್ತಿಗೆ
ಮತ್ತೆ ಕೆಲವರು
ಜೇಬ್ ತೃಪ್ತಿಗೆ


ಹಿಂದೆ ಪ್ರೀತಿ ಮಾಡಿದರೆ

ಹೋಗುತಿತ್ತು ಪ್ರಾಣ

ಇಂದು ಪ್ರೀತಿ ಮಾಡಿದರೆ

ಹೋಗುತ್ತೆ ತ್ರಾಣ

ಹಿಂದೆ ಹಿರಿಯರು ಹೇಳುತಿದ್ದರು
ಉಬ್ಬು ತಗ್ಗುಗಳನ್ನು ನೋಡಿ
ನಡೆದರೆ ಬೀಳುವುದಿಲ್ಲ ಹಳ್ಳಕ್ಕೆ,
ಆದರೆ ಇಂದು ನಾವು ಅವುಗಳನ್ನೇ
ನೋಡಿ ಬೀಳುತ್ತೇವೆ ಹಳ್ಳಕ್ಕೆ


ಮದುವೆಯ ಮೊದಲು

ಪ್ರತಿಯೊಬ್ಬ ಹುಡುಗನು ಕವಿ

ಮದುವೆಯ ನಂತರ

ಅವನಿಗೆಂದೂ ಕೇಳಿಸದು ಕಿವಿ

ಮಾಡಿರುವೆಯೊಂದು ಸಂಕಲ್ಪ
ಹೊಸ ವರುಷಕೆ
ಮಾಡದಿರಲು ಯಾವುದೇ ಸಂಕಲ್ಪ
ಈ ವರುಷಕೆ

Friday, January 1, 2010

ಎತ್ತ ಸಾಗಿದೆ ಪಯಣ?

ಹೊಸ ವರ್ಷದ ನವೋದಯದಂದು
ಮನವೇಕೊ ಕೇಳುತಿದೆ,
ಎತ್ತ ಸಾಗಿದೆ ಪಯಣ?

ಸ್ನೇಹ ಪ್ರೀತಿಯ ಅತೀರೇಕದಲಿ
ಕೇಳಿಸದಾಗಿದೆ ಹೃದಯದ ಒಳದನಿ
ಮೇಲು ಕೀಳಿನ ಬಡಿದಾಟದಲಿ
ಅರ್ಥಹೀನವಾಗಿದೆ ಮನದ ಪಿಸುಮಾತು
ಪ್ರೇಮ ಕಾಮದ ಹುಡುಕಾಟದಲಿ
ಕಳೆದುಹೋಗಿದೆ ಹರೆಯ
ದ್ವೇಷ ಅಸೂಯೆ ಸಾಧಿಸುವಲಿ
ಕೊಲೆಯಾಗಿದೆ ಮನವ್ಯೆಶಾಲ್ಯತೆ
ಸರಿ ತಪ್ಪಿನ ಜಂಜಾಟದಲಿ
ಮಂಕು ಹಿಡಿದಿದೆ ಪ್ರಭುದ್ದತೆಗೆ
ಲಾಭ ನಷ್ಟದ ಲೆಕ್ಕಾಚಾರದಲಿ
ಶೂನ್ಯವಾಗಿದೆ ಪ್ರಾಮಾಣಿಕತೆ
ಬಡವ ಸಿರಿವಂತನೆಂಬ ತಾರತಮ್ಯದಲಿ
ಕಾಣದಾಗಿದೆ ನೆಮ್ಮದಿ
ಹಣ ಆಸ್ತಿ ಸಂಪಾದನೆಯಲಿ
ವಂಚನೆಯಾಗಿದೆ ಆತ್ಮಸಾಕ್ಷಿಗೆ
ಕೆಲಸ ನಿದ್ದೆಗಳ ತಲ್ಲೀನತೆಯಲಿ
ಮರೀಚಿಕೆಯಾಗಿದೆ ಏಕಾಂತ
ಗಳಿಸಿ ಕಳೆಯೋ ಸಡಗರದಲಿ
ಸಿಗದಾಗಿದೆ ಸಾರ್ಥಕತೆ
ನೆನ್ನೆ ನಾಳೆಗಳ ಯೋಚನೆಯಲಿ
ರುಚಿಸದಾಗಿದೆ ಇಂದಿನ ವಾಸ್ತವತೆ
ಹುಟ್ಟು ಸಾವಿನ ಹೆಣಗಾಟದಲಿ
ಕವಲೊಡೆದಿದೆ ಜೀವನದ ಉದ್ದೇಶ

ಹೊಸ ವರ್ಷದ ನವೋದಯದಂದು
ಮನವೇಕೊ ಕೊರಗುತಿದೆ,
ಎತ್ತ ಸಾಗಿದೆ ಪಯಣ?