Monday, December 28, 2009

ಪ್ರೀತಿಯ ಕೃಷಿ

ಮುಂಗಾರಿನ ಸಮಯದಲಿ
ಹೃದಯವೆಂಬ ಹೊಲದಲಿ
ಹದ ಮಾಡಿ ಕೃಷಿ ಮಾಡುತ್ತಿರುವ
ಪ್ರೀತಿ ಬೆಳೆ ಬೆಳೆಯುತ್ತಿರುವ
ನೀನು, ಯಾವ ರೈತನ ಮಗಳೇ?

ನೀ ಗೀಚಿದ ನೇಗಿಲ ಸಾಲುಗಳಲ್ಲೆಲ್ಲಾ
ಬಿತ್ತರಿಸದ ಪ್ರೀತಿಯ ಮೊಳಕೆಗಳು
ವಾಟೆ ಎತ್ತಿ ಮೇಲೆ ಬರುತಿರೆ
ನನ್ನೊಳಗೇನೋ ಪ್ರೀತಿಯ ಬಸುರಿನ ಅನುಭವ

ಇಳಿಯುತಿವೆ ಬೇರುಗಳು ಆಳಕ್ಕೆ
ಬೆಳೆಯುತಿವೆ ರೆಂಬೆ-ಕೊಂಬೆಗಳು ಹೊರಚಾಚಿ
ತಣಿಯುತಿರೆ ಹೃದಯ ಸೊಂಪಾಗಿ ಬೆಳೆದ ಪೈರಿನಿಂದ

ನನಗೇನೋ ಜೀವನವೇ ತಂಪಾದ ಅನುಭವ

ಹೃದಯದಲ್ಲೊಂದು ಪುಟ್ಟ ಗುಡಿಸಲು ಕಟ್ಟಿ
ಸುತ್ತಲು ಮುಳ್ಳಿನ ಬೇಲಿ ಕಟ್ಟಿ
ಕಾಪಾಡುತಲಿರೆ ನಿನ್ನ ಪ್ರೀತಿಯ ಬೆಳೆಯನು
ನನಗೇನೋ ಕಬ್ಬಿಣದ ಕವಚ ಧರಿಸಿದ ಅನುಭವ

ಶುದ್ಧಿಗೊಳಿಸುತಿರುವೆ ನನ್ನ ಹೃದಯವನು
ಹರಗಿ ಕಳೆದು, ಹುಟ್ಟಿದ ಕಳೆಯ
ಹುಡುಕಿ ಕೊಲ್ಲುತಿರೆ, ಆಕ್ರಮಿಸಿದ ಕ್ರಿಮಿಗಳ
ನನ್ನೊಳಗೇನೋ ದೇಹಾತ್ಮ ಶುದ್ಧಿಯಾದ ಅನುಭವ

ನನ್ನ ಹೃದಯದ ಚೆಲುವೇ ಬದಲಾಗಿದೆ ಇಂದು
ಹುಲುಸಾದ ಬೆಳೆಯ ಹಸಿರು ರಂಗಿನಿಂದ
ನಾ ಸಿರಿವಂತನಾದೆ ನಿನ್ನ ಪ್ರೀತಿಯ ಫಸಲಿನಿಂದ
ಈ ಬದಲಾವಣೆ ಸಾಧ್ಯವಾದದ್ದು ಕೇವಲ ನಿನ್ನಿಂದ

Thursday, December 17, 2009

ಚೆಲುವೆ ನೀನು ಮೊದಲ ಬಾರಿ ಎದುರಾದಾ ಘಳಿಗೆ

ಚೆಲುವೆ ನೀನು ಮೊದಲ ಬಾರಿ ಎದುರಾದಾ ಘಳಿಗೆ
ಮಾಡುವುದೇನೆಂದು ತಿಳಿಯದು ಅರಿವಿಗೆ
ತಿಳಿಯದೆ ಒಪ್ಪಿಸಿದೆ ನನ್ನನ್ನೇ ಮರೆವಿಗೆ
ಅದರೂ ಏನೋ ಒಂಥರ ಸಲಿಗೆ
ಯಾಕ್ಹೀಗೆ ಎಂಬುದೇ ತಿಳಿಯದು ಅಸಲಿಗೆ

ಹಿತವಾದ ಭಾವನೆ ಹೃದಯದೊಳಗೆ
ಸಿಹಿಯಾದ ಕಲ್ಪನೆ ಮನಸೊಳಗೆ
ಬಿಸಿಯಾದ ಸಂಚಲನ ಕಣ್ಣೊಳಗೆ
ಮುದವಾದ ರೋಮಾಂಚನ ಮೈಯೊಳಗೆ
ತಿಳಿಯಾದ ಖುಷಿ ಒಳಗೊಳಗೆ
ಅರಿಯದ ಭಯ ಹೊರಗೊರಗೆ

ಎದುರಿಸಲಾಗದೆ ನಿನ್ನ ಕಂಗಳ ಬಾಣದ ಬಿರುಸು
ಪಿಳ ಪಿಳ ನೋಡುವೆ ಅತ್ತಿತ್ತ
ಮೊಟ್ಟೆಯೊಡೆದು ಹೊರ ಬಂದ ಪಿಳ್ಳೆಯ ಹಾಗೆ

ತಡೆಯಲಾರದೆ ನಿನ್ನ ಮಿಂಚಿನಂಥ ನಗುವಿನ ಕಾಂತಿ
ಹಿತವಾಗಿ ನರಳುತ್ತಿರುವೆ ಸುಖದಲ್ಲೇ
ರವಿಯ ಕಿರಣಗಳಿಂದ ಅರಳುವ ತಾವರೆಯ ಹಾಗೆ

ತಾಳಲಾರದೆ ನಿನ್ನ ಮೌನದ ತೀಕ್ಷ್ಣತೆ
ಶರಣಾಗಿರುವೆ ನಿಂತಲ್ಲೇ ಶಿರಬಾಗಿ
ರೆಂಬೆ ಮುರಿದ ಬಳ್ಳಿಯ ಹಾಗೆ

ಸಹಿಸಲಾರದೆ ನಿನ್ನ ಸ್ಪರ್ಶದ ಆಕ್ರಮಣ
ಓಡುತ್ತಿರುವೆ ಕಾಣದೆ ದಿಕ್ಕುಗಳ
ಹುಲಿಯ ಬಾಯಿಂದ ಪಾರಾದ ಜಿಂಕೆಯ ಹಾಗೆ

ಉತ್ತರವಿಲ್ಲದೆ ನಿನ್ನ ಮಾತಿನ ಮೋಡಿಗೆ
ಮನಸಾರೆ ಮೂಕನಾಗಿರುವೆ ಮರುಕ್ಷಣದಲ್ಲೇ
ಸಿಡಿಲು ಗುಡುಗಿಗೆ ಹೆದರಿದ ಚಂದಿರನ ಹಾಗೆ

Friday, December 4, 2009

ಅರಿಯದ ಜೀವನ

ಪಯಣಿಸುತಿರುವೆ ದಾರಿಯಲಿ ಅರಿಯದೆ ದಿಕ್ಕನ್ನು
ತಲುಪುವುದೊಂದೇ ಊರು ಅದುವೇ ಸಾವಿನ ಕೇರಿ

ಮಾಡುತಿರುವೆ ಕರ್ಮ ಅರಿಯದೆ ಮರ್ಮ
ಮಾಡುವುದೊಂದೇ ಸಾಧನೆ ಅದುವೇ ಕಾಲಾಹರಣ

ಬಿಡಿಸುತಿರುವೆ ಚಿತ್ರ ಅರಿಯದೆ ವರ್ಣ
ಕಾಣುವುದೊಂದೇ ಚಿತ್ರ ಅದುವೇ ಪ್ರತಿಬಿಂಬ

ನುಡಿಸುತಿರುವೆ ವಾದ್ಯ ಅರಿಯದೆ ತಾಳ
ಕೇಳುವುದೊಂದೇ ನಾದ ಅದುವೇ ಮೌನ

ಬರೆಯುತಿರುವೆ ಕವನ ಅರಿಯದೆ ಭಾವನೆ
ಬರೆಯುವುದೊಂದೇ ಪಲ್ಲವಿ ಅದುವೇ ಅಹಂಕಾರ

ಓದುತಿರುವೆ ಕಾವ್ಯ ಅರಿಯದೆ ತಿರುಳು
ತಿಳಿಯುವುದೊಂದೇ ಪದ ಅದುವೇ ಸ್ವಾರ್ಥ

ಬಿಡಿಸುತಿರುವೆ ಲೆಕ್ಕ ಅರಿಯದೆ ಸೂತ್ರ
ಸಿಗುವುದೊಂದೇ ಉತ್ತರ ಅದುವೇ ಶೂನ್ಯ

Monday, November 16, 2009

ಹೇಳೇ ಚೆಲುವೆ ನಾ ಏನು ಮಾಡಲಿ?

ಹೇಳಲೇ ಚೆಲುವೆ ಮನಸಿನ ನೂರು ಆಸೆಗಳನು
ನೀ ಬೇಡ ಅಂದರೂ, ತಡೆಯಲಾರೆ ಮನದ ತವಕವನು
ಅದರಲ್ಲಿರುವ ನೂರು ಪುಟ್ಟ ಪುಟ್ಟ ಕನಸುಗಳನು
ಕೇಳಿ ಕೊಂದು ಬಿಡು ಹೃದಯದ ಕಾತರವನು ||ಪ||

ಓದಲೇ ನಿನ್ನ ಕಣ್ಣಲ್ಲಿ ನೀನೆ ಬರೆದ ಓಲೆಯನ್ನು
ಅರಿಯಲೇ ನಿನ್ನ ಭಾವದಲ್ಲಿರುವ ಆ ಲಜ್ಜೆಯನ್ನು
ನಿನ್ನ ಕೈಗಲ್ಲಿರುವ ಆ ನಿನ್ನ ಅಪ್ಪುಗೆಯ ತುಡಿತವನ್ನು
ತಿಳಿಯಲೇ ನಿನ್ನ ಹೃದಯದ ಪ್ರೀತಿಯ ಮಿಡಿತವನ್ನು
ಸವಿಯಲೇ ನನಗೆಂದೆ ಇರುವ ನಿನ್ನ ತುಟಿಯ ಮಧುವನ್ನು

ಹೇಳಲೇ ಚೆಲುವೆ ಮನಸಿನ ನೂರು ಆಸೆಗಳನು
ನೀ ಬೇಡ ಅಂದರೂ, ತಡೆಯಲಾರೆ ಮನದ ತವಕವನು ||ಪ||

ಸುಟ್ಟು ಹೋಗಲೇ ನಿನ್ನ ಬಿಗಿಯಾದ ಬಾಹು ಬಂಧನದ ಬಿಸಿಯಲ್ಲಿ
ಮುಳುಗಿ ಹೋಗಲೇ ನಿನ್ನ ತುಟಿಯ ಜೇನಿನ ಕಡಲಿನಲ್ಲಿ
ಸೋತು ಹೋಗಲೇ ನಿನ್ನ ತುಂಟ ನಗುವಿನ ಆಟದಲ್ಲಿ
ಕಳೆದು ಹೋಗಲೇ ನಿನ್ನ ಸೌಂದರ್ಯದ ಕಾಂತಿಯಲ್ಲಿ
ಸೆರೆಯಾಗಿ ಹೋಗಲೇ ನಿನ್ನ ಮಾತಿನ ಮೋಡಿಯಲ್ಲಿ

ಹೇಳಲೇ ಚೆಲುವೆ ಮನಸಿನ ನೂರು ಆಸೆಗಳನು
ನೀ ಬೇಡ ಅಂದರೂ, ತಡೆಯಲಾರೆ ಮನದ ತವಕವನು ||ಪ||


ಕಿವುಡನಾಗಲೇ ನಿನ್ನ ಅರ್ಥವಿಲ್ಲದ ಮಾತಿಗಾಗಿ
ಕುಂಟನಾಗಲೇ ನಿನ್ನ ಬಾಹುವಿನ ನೆರವಿಗಾಗಿ
ತುಂಟನಾಗಲೇ ನಿನ್ನ ಒಣ ಸಿಟ್ಟಿನ ಒದೆಗಾಗಿ
ರೋಗಿಯಾಗಲೇ ನಿನ್ನ ಪ್ರೀತಿಯ ಕಾಳಜಿಗಾಗಿ
ಉಪವಾಸವಿರಲೇ ನಿನ್ನ ತಡವಾದ ಭೇಟಿಗಾಗಿ

ಹೇಳಲೇ ಚೆಲುವೆ ಮನಸಿನ ನೂರು ಆಸೆಗಳನು
ನೀ ಬೇಡ ಅಂದರೂ, ತಡೆಯಲಾರೆ ಮನದ ತವಕವನು ||ಪ||

ಧರಿಸಲೇ ಉಪ್ಪಿಯ ಉಡುಪು ನಿನ್ನ ಒಂದು ಓರೆ ನೋಟಕ್ಕಾಗಿ
ಹಾಡಲೇ ರಾಜಣ್ಣನ ಹಾಡು ನಿನ್ನ ಒಂದು ತುಂಟ ನಗುವಿಗಾಗಿ
ಕುಣಿಯಲೇ ದೇವನ ಕುಣಿತ ನಿನ್ನ ಒಂದು ಶುಭಾಶಯಕ್ಕಾಗಿ
ಹೇಳಲೇ ಗಣೇಶನ ಸಂಭಾಷಣೆ ನಿನ್ನ ಒಂದು ಸೆಳೆತಕ್ಕಾಗಿ
ನುಡಿಸಲೇ ಹಂಸನ ಸಂಗೀತ ನಿನ್ನ ಒಂದು ಕ್ಷಣಕ್ಕಾಗಿ

ಹೇಳಲೇ ಚೆಲುವೆ ಮನಸಿನ ನೂರು ಆಸೆಗಳನು
ನೀ ಬೇಡ ಅಂದರೂ, ತಡೆಯಲಾರೆ ಮನದ ತವಕವನು ||ಪ||

Saturday, November 14, 2009

ಹೀರೋ ಪೆನ್ನಿನ ಆಸೆಯಿಂದ ಆದ ಹೀರೋ!

ನನ್ನ ಇಲ್ಲಿಯವರೆಗಿನ ಜೀವನ ಕೇವಲ ಆಕಸ್ಮಿಕ ಘಟನೆಗಳ ಸರಮಾಲೆ, ನನ್ನ ಜೀವನದ ಕೆಲವು ಮುಖ್ಯವಾದ ಕೆಲವು ತಿರುವುಗಳು ಸರಿಯಾದ ಸಮಯದಲ್ಲಿ ಘಟಿಸದಿದ್ದರೆ, ನಾನು ದಿನ ಏನಾಗಿರ್ತೆದ್ದೆ ಅಂಥ ಊಹೆ ಮಾಡಿಕೊಳ್ಳಲು ಕೂಡ ಕಷ್ಟ ಹಾಗ್ತದೆ (ಬಹುಶಃ ಬೇಲೂರು ಕ್ಷೇತ್ರದ ಶಾಸಕ ಆಗಿರುತಿದ್ದೆ:-)). ಅಂಥ ಕೆಲವು ಘಟನೆಗಳ ಬಗ್ಗೆ ಬರೆಯುವ ಅಸೆ. ಇದನ್ನೆಲ್ಲಾ ನಾನು ಹೀರೋ ಅಂಥ ಜಂಭ ತೋರ್ಪಡಿಸಲು ಬರೆಯುತ್ತಿಲ್ಲ, ನಮ್ಮ ಜೀವನದಲ್ಲಿ ನೆಡೆಯುವ ಸಣ್ಣ ಸಣ್ಣ ಘಟನೆಗಳು ಎಷ್ಟು ಮಹತ್ವ ಪಡೆಯುತ್ತವೆ ಎಂದು ಹೇಳುವ ಪ್ರಯತ್ನ. I can see all those dots connecting perfectly in my life.

೮ನೇ ತರಗತಿಯನ್ನು ಹಳೇಬೀಡಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತಿದ್ದೆ. ನಮ್ಮೂರಿನಿಂದ ಹಳೇಬೀಡು ಸುಮಾರು ಕಿ ಮಿ, ದಿನಾಲು ಸೈಕಲ್ಲಿನಲ್ಲಿ ಹೋಗಿ ಬರುತಿದ್ದೆ. ವರ್ಷ ದ್ವಿತೀಯ ದರ್ಜೆಯಲ್ಲಿ (೩೧೦/೬೨೫) ಉತ್ತೀರ್ನನಾಗಿದ್ದು ನನ್ನ ದೊಡ್ಡ ಸಾಧನೆ, ಏಕೆಂದರೆ ಒಂದೇ ಒಂದು ದಿನ ಕೂಡ ಮನೆಯಲ್ಲಿ ಕೂತು ಓದಿರಲಿಲ್ಲ (ನಂಬಿದರೆ ನಂಬಿ, ಇದು ಸತ್ಯ!. ನನಗೆ ತಿಳಿದಿರೋ ಪ್ರಕಾರ, ನಾನು ನೇ ತರಗತಿ ಮುಗಿಸಿದ್ದರು ಒಂದು ದಿನ ಕೂಡ ಮನೆಯಲ್ಲಿ ಕೂತು ಓದಿರಲಿಲ್ಲ, ನನಗೆ ಓದಬೇಕು ಅಂಥ ಕೂಡ ಯಾರು ಹೇಳಿರಲಿಲ್ಲ). ನಮ್ಮ ಶಾಲೆಯ ಒಟ್ಟು ೧೬೦ ವಿಧ್ಯಾರ್ಥಿಗಳಲ್ಲಿ, ಸುಮಾರು ೧೦ ಜನ ಪ್ರಥಮ ದರ್ಜೆ ಹಾಗು ಸುಮಾರು ೨೦ ಜನ ದ್ವೀತಿಯ ದರ್ಜೆಯಲ್ಲಿ ಪಾಸಾಗಿದ್ದರು, ಅವರುಗಳಲ್ಲಿ ನಾನೊಬ್ಬ ಆಗಿದ್ದರಿಂದ ನನ್ನ ಸಾಧನೆ ಬಗ್ಗೆ ನನಗೆ ತುಂಬ ಸಮಾಧಾನ ಇತ್ತು. ಮನೆಗೆ ಹೋಗಿ ಅವ್ವಂಗೆ ನಾನು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದೇನೆ ಅಂಥ ಹೇಳಿದೆ, ನಮ್ಮಪ್ಪಂಗೆ ಅದನ್ನೆಲ್ಲಾ ಕೇಳುವುದಕ್ಕೆ ಸಮಯ ಇರಲಿಲ್ಲ. ನನ್ನ ಅವ್ವ ಹೋಗಿ ಊರಿನಲ್ಲಿರುವ ಪ್ರತಿಯೊಬ್ಬರಿಗೂ "ನನ್ಮಗ ಹಳೇಬೀಡಿಗೆ ಸೆಕೆಂಡ್ ಬಂದಿದ್ದಾನೆ!" ಅಂಥ ಎಲ್ಲಾರಿಗೂ ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದರು, ಅಂದು ನಮ್ಮ ಮನೆಯಲ್ಲಿ ಸುಮಾರು ೨೫ ಜನರಿಗೆ ಹಬ್ಬದೂಟ!.

ನೇ ತರಗತಿ ಶುರುವಾದ ಕೆಲವೇ ದಿನಗಳಲ್ಲಿ ಶಾಲೆಯಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪದೇ ಇಬ್ಬರು ವಿಧ್ಯಾರ್ಥಿಗಳಿಗೆ "ಹೀರೋ" ಪೆನ್ನನ್ನು ಉಡುಗೊರೆಯಾಗಿ ಕೊಟ್ಟರು. ನಮ್ಮ ತರಗತಿಯಲ್ಲಿ ಪ್ರದೀಪ್ ಮತ್ತು ತಾರಮಣಿ ಎಂಬ ಇಬ್ಬರು ವಿಧ್ಯಾರ್ಥಿಗಳಿಗೆ ಸಿಕ್ಕಿತ್ತು.

ಸಮಯದಲ್ಲಿ ನಮ್ಮಪ್ಪ ನನಗೆ ವಾರಕ್ಕೆ ಕೊಡುತಿದ್ದ "ಪಾಕೆಟ್ ಮನಿ" ಕೇವಲ ಒಂದರಿಂದ ಐದು ರೂಪಾಯಿಗಳು, ಅದನ್ನು ಮೈಸೂರ್ ಪಾಕ್ ಅಥವಾ ಕಡ್ಲೆ ಮಿಠಾಯಿ ತಿಂದು ಮುಗಿಸಿ ಬಿದುತಿದ್ದೆ. ಆದರೆ ನನಗೆ ಹೀರೋ ಪೆನ್ ತಗೊಂಡು ಬರೀಬೇಕು ಅಂಥ ತುಂಬ ಆಸೆ ಇತ್ತು. ನಮ್ಮಪ್ಪನ್ನ ತುಂಬ ಸರತಿ ಕೇಳಿ ಸುಮ್ಮನಾಗಿದ್ದೆ ಮತ್ತು ಅಪ್ಪ ಕೊಡುತಿದ್ದ "ಪಾಕೆಟ್ ಮನಿ"ಯಲ್ಲಿ ಪೆನ್ ತಗೋಳೋದು ಸಾಧ್ಯ ಇರಲಿಲ್ಲ (ತುಂಬ ಸರತಿ ಹಣ ಕೂಡಿ ಹಾಕಲಿಕ್ಕೆ ತಿಂಗಳಗಟ್ಟಲೆ ಪ್ರಯತ್ನ ಮಾಡಿ, ಎಲ್ಲ ಹಣ ಕಳೆದು ಕೊಳ್ಳುತಿದ್ದೆ).

೯ನೆ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದರೆ ನನಗೆ ಕೂಡ ಹೀರೋ ಪೆನ್ನು ಸಿಗುತ್ತದೆ ಅಂಥ ಅಸೆ ಆಯಿತು. ನನಗೆ ತಿಳಿಯದೆ ನಾನು ಕೂಡ ಓದಿ ಅತಿ ಹೆಚ್ಚು ಅಂಕ ತೆಗೆಯಬೇಕು ಅಂಥ ತೀರ್ಮಾನ ಮಾಡಿಬಿಟ್ಟೆ. ಮನೆಗೆ ಹೋಗಿ ಅಪ್ಪನಿಗೆ ನಾನು ಹಾಸ್ಟೆಲ್ ಸೇರಿಕೊಳ್ಳುತ್ತೇನೆ, ದಿನ ಹೋಗಿ ಬರಲಿಕ್ಕೆ ಕಷ್ಟ ಆಗ್ತದೆ ಅಂಥ ಹೇಳಿದೆ. ನಮ್ಮ ಕ್ಷೇತ್ರದ MLA ಜೊತೆ ಮಾತಾಡಿ ಒಂದೇ ದಿನದಲ್ಲಿ ಹಾಸ್ಟೆಲ್ ಗೆ ಸೇರಿಸಿದರು. ಹಾಸ್ಟೆಲ್ ನಲ್ಲಿ ಸುಮಾರು ೫೦ ಜನರು ಒಂದು ದೊಡ್ಡ ಹಾಲಿನಲ್ಲಿ ಜೀವಿಸುತಿದ್ದೆವು. ಅಲ್ಲಿಯ ಊಟ ಉಡುಪಿಯ ಹೋಟೆಲ್ ಊಟಕ್ಕಿಂತ ಕೆಟ್ಟದಾಗಿರುತಿತ್ತು. ಮೊದ ಮೊದಲು ಹುಡುಗರೆಲ್ಲ ಪ್ರತಿ ರಾತ್ರಿ ಓದುವುದನ್ನು ನೋಡಿ ನನಗೆ ವಿಚಿತ್ರ ಅನ್ನಿಸಿತಿತ್ತು. ಆದರೆ ಹಾಸ್ಟೆಲ್ ಭಟ್ಟರ ಶಿಕ್ಷೆ ತಡೆಯಲಾಗದೆ ನಾನು ಕೂಡ ಓದಲು ಶುರು ಮಾಡಿದೆ. ಅಲ್ಲಿ ಇದ್ದ ತುಂಬ ವಿಧ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುತಿದ್ದರು, ಅವರುಗಳಿಗೆಲ್ಲ ಹೀರೋ ಪೆನ್ನಿನಲ್ಲಿ ಬರೋಯೋದು ಕಡ್ಡಾಯವಾಗಿತ್ತು. ನಾನು ಅವರ ಹತ್ತಿರ ಹೀರೋ ಪೆನ್ನನು ಕೇಳಿ ಪಡೆದು, ಅದರಲ್ಲಿ ಬರೆದು ನನ್ನ ಆಸೆ ತೀರಿಸಿಕೊಳ್ಳುತಿದ್ದೆ.

ಈಗೆ ಒಂದು ದಿನ ೯ನೆ ತರಗತಿಯ ಪಲಿತಾಂಶ ಕೂಡ ಬಂತು, ಹಾಗು ನನಗೆ ಆಶ್ಚರ್ಯ ಕಾದಿತ್ತು. ನಾನು ನಮ್ಮ ತರಗತಿಗೆ ಮೊದಲೆನೆಯವನಾಗಿ ಉತೀರ್ಣನಾಗಿದ್ದೆ (೪೪೯/೬೨೫)!!!. ಪ್ರತಿ ವರ್ಷದ ಹಾಗೆ ಆ ವರ್ಷ ಕೂಡ ಪ್ರತಿಭಾವಂತರಿಗೆ ಬಹುಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನಗೆ ಪ್ರಥಮ ಬಂದ ಖುಶಿಗಿಂತ, ಹೀರೋ ಪೆನ್ನಿಗಾಗಿ ಭಕಪಕ್ಷಿಯಂತೆ ಕಾಯುತಿದ್ದೆ. ಆದರೆ ನನ್ನ ದುರದೃಷ್ಟಕ್ಕೆ ಆ ವರ್ಷ ಹೀರೋ ಪೆನ್ನಿನ ಬದಲು ೫೦ ರೂಗಳನ್ನು ಹುಡುಗರೆಯಾಗಿ ಕೊಟ್ಟರು.

ನಾನು ಆ ಹಣವನ್ನು ನೇರವಾಗಿ ಮನಗೆ ತಗೊಂಡು ಹೋದೆ. ಅವ್ವನಿಗೆ ನಾನು ಈ ಹಣದಿಂದ ಹೀರೋ ಪೆನ್ನನ್ನು ತೆಗೆದು ಕೊಳ್ಳುತ್ತೇನೆ ಅಂಥ ಹೇಳಿದೆ, ಅದಕ್ಕೆ ಅವರು ಹಾಗೆ ಬಹುಮಾನವಾಗಿ ಸಿಕ್ಕಿದ ಹಣ ನಮ್ಮದಲ್ಲ, ಅದನ್ನು ನಾವು ಉಪಯೋಗಿಸಬಾರದು ಅಂಥ ಹೇಳಿ, ನನ್ನ ಕೈಯಿಂದ ನಮ್ಮೂರಿನ ದೇವಸ್ತಾನದ ಹುಂಡಿಗೆ ಹಾಕಿಸಿದರು!. ನನಗೆ ತುಂಬ ನಿರಾಸೆಯಾಗಿ ಅಳು ಬಂದು ಬಿಟ್ಟಿತು, ನಾನು ಅಳುವುದನ್ನು ನೋಡಿದ ಅವ್ವ, ಅಪ್ಪನಿಗೆ ಹೇಳಿ ಕೊನೆಗೂ ಒಂದು ಹೀರೋ ಪೆನ್ನು ಕೊಡಿಸಿದರು!. ನನ್ನ ಆಸೆ ಕೂಡ ತೀರಿತು.

ಶಾಲೆಯಲ್ಲಿ ಜರುಗುತಿದ್ದ ಕಾರ್ಯಕ್ರಮ ನನ್ನ ಜೀವನದ ಮೊದಲ ಮುಖ್ಯವಾದ ತಿರುವು, ಅದ್ದರಿಂದ ನನ್ನ ಶಾಲೆಯ ಶಿಕ್ಷಕರಿಗೆ ನಾನು ಸದಾ ಚಿರಋಣಿ. ಚಿಕ್ಕ ವಯಸ್ಸಿನ ಆ ಸಣ್ಣ ಸಣ್ಣ ಆಸೆಗಳು ತುಂಬ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿಸುತ್ತವೆ. "ಜೀವನದಲ್ಲಿ ಯಾವುದೇ ಗುರಿ ಬೆನ್ನು ಹತ್ತಲು ಒಂದು ಸಣ್ಣ motivation ಅವಶ್ಯಕತೆ ಯಾವಾಗಲು ಇರುತ್ತದೆ". ಈಗೆ ನನ್ನ ಹಿಂದಿನ ಸಾದನೆಗಳನ್ನೆಲ್ಲ ಮೆಲುಕು ಹಾಕಿ ನನ್ನ ಮುಂದಿನ ಗುರಿ ಸಾದಿಸಲಿಕ್ಕೆ inspire ಮಾಡಿಕೊಳ್ಳುತಿದ್ದೇನೆ. ನಮ್ಮ ಜೀವನದಲ್ಲಿ ನಾವು ಕೂಡ ನಮ್ಮ ಸುತ್ತ ಮುತ್ತ ಇರುವವರಿಗೆ ಕೈಲಾದ ಮಟ್ಟಿಗೆ motivate ಮಾಡಿ, ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳುವ.


ಪ್ರೀತಿಯಿಂದ
ಗೌಡ.

Saturday, September 19, 2009

ಮಸ್ತ್ ಮಜಾ ಮಾಡು!

ನೆನ್ನೆಯ ಹಾಗು ನಾಳೆಯ ಜಂಜಾಟಗಳ ಬಗ್ಗೆ ವ್ಯರ್ತವಾಗಿ ಯೋಚನೆ ಮಾಡಿ ಕಾಲಹರಣ ಮಾಡೋದು ಬಿಟ್ಟು , ಇಂದಿನ ದಿನವನ್ನು ಮಸ್ತ್ ಮಜಾ ಮಾಡಿ, ಕಳೆದು ಹೋದ ಕ್ಷಣಗಳು ಮತ್ತೆ ಸಿಗುವುದಿಲ್ಲ. ಇದು ತುಂಬ ಬುದ್ದಿ ಜೀವಿಗಳು ಹೇಳುವ ಬುದ್ದಿ ಮಾತು. ನನಗೂ ತುಂಬ ಬುದ್ದಿ ಜೀವಿಗಳು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಈ "ಮಜಾ" ಮಾಡೋದು ಅಂದ್ರೆ ಏನು ಅಂಥ ಮಾತ್ರ ಯಾರು ಹೇಳಿಲ್ಲ, ನನಗೂ ಕೂಡ ಇನ್ನು ಅರ್ಥ ಹಾಗಿಲ್ಲ. ಮಜಾ ಎಂಬ ಪದಕ್ಕೆ ಯಾವುದೇ ಸ್ಥಿರವಾದ ಅರ್ಥ ಇಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ ಹಾಗು ಒಳ್ಳೇದು-ಕೆಟ್ಟದ್ದು ಎಂಬ ವ್ಯತ್ಯಾಸಕ್ಕೂ , ಈ ಪದಕ್ಕೆ ಯಾವುದೇ ಸಂಭಂದ ಇಲ್ಲಾ.

ತುಂಬ ಸಲ ನಮಗೆ ಏನು ಮಾಡಿದರೆ ಮಜಾ ಸಿಗುತ್ತದೆ ಎಂದು ತಿಳಿದಿರುವುದಿಲ್ಲ. ಅದನ್ನು ತಿಳಿದುಕೊಳ್ಳುವುದಕ್ಕೆ ಯಾವುದೇ ಪುಸ್ತಕಗಳು ಸಿಗುವುದಿಲ್ಲ, ಯಾರು ಹೇಳಿಕೊಡುವುದಿಲ್ಲ, ಹೇಳಿಕೊಟ್ಟರು ಯಾರು ಕೇಳುವುದಿಲ್ಲ. ಕೇವಲ ನಾವುಗಳು ಅದು ಮಾಡಿದರೆ ಸಿಗುತ್ತದೆ ಅಥವಾ ಇದನ್ನು ಮಾಡಿದರೆ ಸಿಗುತ್ತದೆ ಎಂದು ನಮ್ಮ ಮನಸ್ಸಿನಲ್ಲಿ ತುಂಬಿಕೊಂಡು ಅದನ್ನೇ ಮಾಡುತ್ತಿರುತ್ತೇವೆ, ಜೊತೆಗೆ ಮಜಾ ಮಾಡುತಿದ್ದೀವೆ ಎಂದು ನಮಗೆ ನಾವೇ ನಂಬಿಸಿಕೊಂಡು ಖುಷಿ ಪಡುತ್ತಿರುತ್ತೇವೆ. ನಮ್ಮ ಈ "ನಂಬಿಸಿಕೊಳ್ಳುವುದು" ವಯಸ್ಸಿಗೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ, ಹಾಗೆ ನಾವು ಅವುಗಳನ್ನು ಮಾಡಿಕೊಂಡು ನಾವು ಮಜಾ ಮಾಡುತಿದ್ದೆವೆ ಎಂದು ನಂಬಿಕೊಂಡೇ ಜೀವನ ಮಾಡುತಿರುತ್ತೇವೆ. ಆದರೆ ಅದು ಸರಿಯೇ? ತಪ್ಪೇ? ಅದರ ಅವಶ್ಯಕತೆ ಇದೆಯಾ? ಇದಕ್ಕಿಂತ ಉತ್ತಮವಾಗಿ ಮಜಾ ಮಾಡಬಹುದಾ? ಎಂದೆಲ್ಲಾ ಯೋಚನೆ ಮಾಡೋದೇ ಇಲ್ಲ, ನಮಗೆ ನಾವು ಪ್ರಶ್ನೆ ಕೇಳಿ ಕೊಳ್ಳೋದೇ ಇಲ್ಲ. ಅಕಸ್ಮಾತ್ ಯೋಚನೆ ಮಾಡಿದರು ಅದಕ್ಕೆ ಉತ್ತರ ಸಿಗೋದೆ ಇಲ್ಲ, ಯಾಕಂದರೆ ಅದಕ್ಕೆ ಒಂದು ಜನರಲ್ ಅರ್ಥ ಕೊಡೋದು ಕಷ್ಟ, ಸಂದರ್ಭಗಳಿಗನುಗುಣವಾಗಿ ಅದು ಬದಲಾಗುತ್ತಾ ಹೋಗುತ್ತದೆ. ಕುಡುಕನಿಗೆ ಕುದಿಯೋದ್ರಿಂದ ಸಿಗುತ್ತಾ, ಋಷಿಗೆ ದ್ಯಾನ ಮಾಡುವುದರಲ್ಲಿ ಸಿಗುತ್ತದೆ, ಪ್ರೇಮಿಗೆ ಪ್ರೀತಿಸುವುದರಲ್ಲಿ ಸಿಗುತ್ತೆ, ಮೇಲ್ಜಾತಿಯವರಿಗೆ ಕೆಲ ವರ್ಗದವರನ್ನು ತುಳಿಯುವುದರಲ್ಲಿ ಸಿಗುತ್ತೆ, ರಾಜಕಾರಣಿಗಳಿಗೆ ಮೋಸ ಮಾಡೋದ್ರಲ್ಲಿ ಸಿಗುತ್ತೆ, ಸಿನಿಮ ತಾರೆಯರಿಗೆ ಗಾಸಿಪ್ ಮಾಡೋದ್ರಲ್ಲಿ ಸಿಗುತ್ತೆ, ಕೊಲೆಗಾರನಿಗೆ ಕೊಲೆ ಮಾಡೋದ್ರಿಂದ ಸಿಗ್ತದೆ, ನಿರಾಶಾವಾದಿಗಳಿಗೆ ಬೇರೆಯವರನ್ನು ಹೀಯಾಳಿಸುವುದರಿಂದ ಸಿಗುತ್ತೆ, ಮತ್ತೆ ಕೆಲವರಿಗೆ ಸಮಾಜ ಸೇವೆ ಮಾಡೋದ್ರಲ್ಲಿ ಸಿಗುತ್ತೆ, ಕೆಲವರಿಗೆ ಕಳ್ಳತನ ಮಾಡೋದರಲ್ಲಿ ಸಿಗುತ್ತೆ, ಕೆಲವರಿಗೆ ಕೆಲವರಿಗೆ ಕೆಲಸ ಮಾಡೋದ್ರಿಂದ ಸಿಗುತ್ತೆ, ಕೆಲವರಿಗೆ ಆಟ ಅದೊದ್ರಿಂದ ಸಿಗುತ್ತೆ, ಕೆಲವರಿಗೆ ಒಂಟಿಯಾಗಿ ಇರೋದ್ರಲ್ಲಿ ಸಿಗುತ್ತೆ, ಕೆಲವರಿಗೆ ಪ್ರವಾಸ ಮಾಡೋದ್ರಲ್ಲಿ ಸಿಗುತ್ತೆ, ಕೆಲವರಿಗೆ ಪುಸ್ತಕಗಳನ್ನು ಓದುವುದರಿಂದ ಸಿಗುತ್ತದೆ. ಈಗೆ ಈ ಪಟ್ಟಿ ದೊಡ್ಡದಾಗುತ್ತ ಹೋಗುತ್ತದೆ, ಆದರೆ ಇದರಲ್ಲಿ ಯಾವುದು ಸರಿ, ಯಾವುದು ತಪ್ಪು, ಯಾವುದು ಉತ್ತಮ? ಯಾವುದು ಅವಶ್ಯಕ? ಇದಕ್ಕೆಲ್ಲ ಉತ್ತರ ಎಲ್ಲಿ ಸಿಗುತ್ತದೆ, ಉತ್ತರಿಸುವವರಾರು. ಯಾರನ್ನಾದರು ಕೇಳಿದರೆ, ಅವರುಗಳಿಗೆ ಅವರದು ಉತ್ತಮವಾಗಿ ತೋರುತ್ತದೆ.

ಈತ್ತಿಚಿಗೆ ಒಮ್ಮೆ ಸ್ನೇಹಿರೊಂದಿಗೆ ಕೂತಿದ್ದಾಗ ಅವನಿಗೆ ಕೇಳಿದೆ, ಯಾಕೆ ಕುಡಿಯುತ್ತಿರ ಏನು ಸಿಗುತ್ತದೆ ಅದರಿಂದ(ಇದರ ಅರ್ಥ ನಾನು ಕುಡಿಯುವುದಿಲ್ಲ! - ನಂಬಿದರೆ ನಂಬಿ, ಬಿಟ್ಟರೆ ಬಿಡಿ), ಸುಮ್ಮನೆ ಆರೋಗ್ಯ ಹಾಳು ಮಾಡಿಕೊಂಡು ಬೇಗ ಸಾಯ್ತಾರೆ ಅಂತ ಗೊತ್ತಿದ್ದರೂ ಕುಡಿಯುತ್ತಿರಲ್ಲ, ಇದು ಸರೀನಾ?. ಅದಕ್ಕೆ ಅವನ ಉತ್ತರ "ನೀವು ಕುಡಿಯದೆ ಇರೋ ಸಭ್ಯರು ಏನು ಚಿರಂಜೀವಿಗಳಾಗ್ತಿರಾ? ನೀವುಗಳು ಸಾಯೋದೆ ಇಲ್ವಾ? ನೀವುಗಳು ಅಷ್ಟು ವರ್ಷ ಬದುಕಿ ಮಜಾ ಮಾಡೋದನ್ನ ನಾವು ಕೆಲವೇ ವರ್ಷಗಲ್ಲಿ ಅನುಭವಿಸಿ, ನಿಮಗಿಂತ ಸ್ವಲ್ಪ ಬೇಗ ಹೋಗ್ತಿವಿ. ಸಿಗೋದು ಒಂದೇ ಜೀವನ ಅದರಲ್ಲಿ ಎಲ್ಲದನ್ನು ಅನುಭವಿಸಬೇಕು, ಮತ್ತೆ ಕೊನೆಗೆ ಮಜಾ ಮಾಡಲಿಲ್ಲ ಎಂದು ಕೊರಗಬಾರದು. ಅದಕ್ಕೆ ದೊಡ್ಡೋರು ಹೇಳಿರೋದು - ಇಲಿಯಾಗಿ ನೂರು ವರುಷ ಬಾಳುವುದಕ್ಕಿಂತ, ಹುಲಿಯಾಗಿ ಮೂರು ವರುಷ ಬಾಳು". ಇನ್ನೊಬ್ಬ ಹೇಳಿದ "ಯಾವ ವಯಸ್ಸಿನಲ್ಲಿ ಯಾವದು ಮಾಡಬೇಕು ಅದನ್ನೇ ಮಾಡೋದೇ ಮಜಾ, ಉದಾಹರಣೆಗೆ ಈ ವಯಸ್ಸಿನಲ್ಲಿ ಯಾವುದಾದರು ಹುಡುಗಿಯನ್ನ ಮನಾಸರೆ ಲವ್ ಮಾಡಬೇಕು, ಮಜಾ ಮಾಡಬೇಕು, ಒಮ್ಮೆ ಈ ವಯಸ್ಸು ಕಳೆದರೆ ನಿನಗೆ ಮಾಡಬೇಕು ಅಂಥ ಅನ್ನಿಸೋದಿಲ್ಲ, ಅನ್ನಿಸಿದರೂ ಮಾಡಲಾಗುವುದಿಲ್ಲ - ಸೊ ಜಸ್ಟ್ ಡೂ ಇಟ್!". ಮತ್ತೊಬ್ಬ ಹೇಳಿದ " ನಾವ್ಯಾರು ಕೇಳಿಕೊಂಡ ಇಲ್ಲಿಗೆ ಮಾನವರಾಗಿ ಬಂದಿಲ್ಲಾ, ಹಾಗೆ ನಾವ್ಯಾರು ಕೇಳಿಕೊಂಡರು ಇಲ್ಲೇ ಉಳಿಕೊಳ್ಳಲಾಗುವುದಿಲ್ಲ, ಅಂದ ಮೇಲೆ ಯಾಕೆ ಸರಿ- ತಪ್ಪಿನ ಪ್ರಶ್ನೆ. ಬಂದದ್ದಾಯಿತು, ಏನಾದರು ಮಾಡಲೇ ಬೇಕು, ನಿನಗಾವುದೇ ಇಷ್ಟವೋ ಅದನ್ನೇ ಮಾಡು, ಆದರೆ ನಾಲ್ಕು ಜನಕ್ಕೆ ಉಪಯೋಗ ಆಗುವಂತಹ ಕೆಲಸ ಮಾಡಿ ಹೋಗು" ಮಗದೊಬ್ಬ ಹೇಳಿದ "ಮನುಷ್ಯನಾಗಿ ಜನುಮ ಪಡೆಯೋದು ತುಂಬ ಕಷ್ಟ, ಈ ಜನ್ಮದಲ್ಲಿ ಮಾಡಿದ ಕರ್ಮಗಳ ಆಧಾರದ ಮೇಲೆ ನಿನ್ನ ಮುಂದಿನ ಜನ್ಮದ ನಿರ್ಧಾರ ಆಗ್ತದೆ. ಮತ್ತೆ ಮನುಷ್ಯನಾಗಿ ಹುಟ್ಟಬೇಕು ಅಂಥ ಆಸೆ ಇದ್ರೆ ಒಳ್ಳೆ ಕೆಲಸಗಳನ್ನು ಮಾಡು, ಇಲ್ಲಾ ಅಂದ್ರೆ ಯಾವುದೊ ಕ್ರಿಮಿಯೋ, ಕೀಟವೂ, ಪ್ರಾಣಿಯೋ ಆಗಿ ಹುಟ್ಟುತ್ತೀಯ". ಅವರುಗಳು ಹೇಳಿದ್ದು ಎಲ್ಲ ಸರಿ ಇಲ್ಲದಿದ್ದರೂ, ಎಲ್ಲ ಅರ್ಥಹೀನ ಕೂಡ ಅಲ್ಲ. ನನಗೆ ಆಗ ಯೋಚನೆ ಶುರು ಆಯಿತು, ನಾನು ಮಾಡುತ್ತಿರುವುದನ್ನೇ ಸರಿ ಅಂದುಕೊಂಡು ನಾನೇನಾದರು ಜೀವನ ವ್ಯರ್ತ ಮಾಡುತಿದ್ದೇನಾ? ಈಗೆ ನಾನು ಸರಿ ಅಂದು ಕೊಂಡದ್ದನ್ನು ಮಾಡಿ ಒಮ್ಮೆ ಸಾಯುವುದೇ ಜೀವನಾನ? ನಾನು ಏನು ಮಾಡಬೇಕು? ಜೀವನದ ಗುರಿ ಏನು?. ನಾನು ಮಾಡುತ್ತಿರುವದು ಸರಿಯೇ? ಅವರು ಮಾಡುತ್ತಿರುವದು ಸರಿಯೇ?, ಇಬ್ಬರದು ಸರಿಯೇ?, ಇಬ್ಬರದು ತಪ್ಪೆ?. ಈ ಪ್ರಶ್ನೆಗಳಿಗೆ ನನ್ನ ತಲೆಯಲ್ಲಿ ಯಾವುದೇ ರೆಡಿ ಮೇಡ್ ಉತ್ತರಗಳು ಕೂಡ ಸಿಗಲಿಲ್ಲ.

ಚಿಕ್ಕ ವಯಸ್ಸಿನಲ್ಲಿ ಬೇರೆ ಮಕ್ಕಳೊಂದಿಗೆ ಮನಸ್ಪೂರ್ತಿ ಆಟ ಆಡೋದನ್ನೇ ಮಜಾ ಅಂದುಕೊಂಡಿದ್ದೆ. ಸ್ವಲ್ಪ ದೊಡ್ಡವನಾಗಿ ಕಾಲೇಜಿಗೆ ಬಂದ ಮೇಲೆ ಹುಡುಗರೊಂದಿಗೆ ಸುತ್ತಾಡೋದು, ಫಿಲಂ ನೋಡೋದು, ಸ್ನೇಹಿತರೊಂದಿಗೆ ಹರಟೋದು ಮಜಾ ಅನ್ನಿಸುತಿತ್ತು. ಕೆಲಸಕ್ಕೆ ಸೇರಿದ ಮೇಲೆ ಪ್ರವಾಸ ಹೋಗೋದು, ಪಾರ್ಟಿ ಮಾಡೋದು, ನಾಲಿಗೆಯ ರುಚಿ ತಣಿಯುವಷ್ಟು ರುಚಿ ರುಚಿಯಾದ ಊಟ ಮಾಡೋದು, ಬ್ರಾಂಡೆಡ್ ಬಟ್ಟೆ ಹಾಕೋದು, ಸ್ವಲ್ಪ ಫ್ಯಾಷನ್ ಕಡೆಗೆ ಗಮನ ಕೊಡೋದು, ಹಾಗು ಬೈಕ್ ನಲ್ಲಿ ಸುತ್ತಾಡೋದರಿಂದ ಮಜಾ ಸಿಗುತ್ತಿತ್ತು. ಅದನ್ನೇ ಇಷ್ಟು ದಿನ ಮಾಡಿಕೊಂಡು ಬಂದೆ, ಆದರೆ ಇತ್ತೀಚಿಗೆ ಇದಾವುದು ಮನಸ್ಸಿಗೆ ಮಜಾ ಕೊಡುತ್ತಿಲ್ಲ, ಮಾಡುತ್ತಿರುವುದು ಸರಿಯೋ, ತಪ್ಪೋ ತಿಳಿಯುತ್ತಿಲ್ಲ. ಜೊತೆಗೆ ತುಂಬ ಜನರ ಹಾಗೆ ತುಂಬ ಹಣ ಮಾಡೋದು, ಮಾಡುವೆ ಹಾಗೋದು, ಮಕ್ಕಳು ಮಾಡೋದು, ಮನೆ ಕಟ್ಟೊದು, ಕಾರು ಖರೀದಿ ಮಾಡೋದು, ಕುಡಿಯೋದು, ಸಿಗರೇಟು ಸೇದೋದು, ಫ್ಯಾಷನ್ ಮಾಡೋದು ಜೀವನದಲ್ಲಿ ಮಜಾ ಕೊಡುತ್ತದೆ ಅಂತ ನನಗೆ ಅನ್ನಿಸುತ್ತಿಲ್ಲ. ಏನು ಮಾಡಿದರೆ ಮಜಾ ಸಿಗುತ್ತೆ ಅನ್ನೋದು ಅನ್ನುವುದು ಕೂಡ ಮನಸ್ಸಿನಲ್ಲಿ ಸರಿಯಾದ ರೂಪ ತೆಗೆದುಕೊಳ್ಳುತ್ತಿಲ್ಲ. ತುಂಬ ಯೋಚನೆಗಳು ತಲೆಯಲ್ಲಿ ಸುಳಿದಾಡುತ್ತಿವೆ ಆದರೆ ಯಾವುದು ಸರಿ, ಯಾವುದು ತಪ್ಪು, ಯಾವುದು ಉತ್ತಮ ಎಂಬುದನ್ನು ನಿರ್ಧಾರ ಮಾಡಲು ಆಗ್ತಾ ಇಲ್ಲ.

ನಿಮಗೆ ಏನು ಅನ್ನಿಸುತ್ತದೆ ಅನ್ನುವುದನ್ನು ಈ ಕೆಳಗಿನ "comments"ನಲ್ಲಿ ದಯಮಾಡಿ ತಿಳಿಸಿ.

ಪ್ರೀತಿಯಿಂದ
ಗೌಡ.

Wednesday, September 16, 2009

ಆಟ-ಹುಡುಗಾಟ

ಇತ್ತೀಚಿಗೆ ಒಮ್ಮೆ ಮಂಗಳೂರಿಗೆ ಯಾವುದೋ ಕಾರ್ಯದ ಮೇಲೆ ಹೋಗಿದ್ದಾಗ, ಸ್ನೇಹಿತರು "ಭರತ್ ಮಾಲ್" ಸುತ್ತಾಡುವ ಎಂದು ಕರೆದು ಕೊಂಡು ಹೋದರು. ಉಡುಪಿಗೆ ಬಂದು ೩+ ವರ್ಷಗಳಲ್ಲಿ ಪ್ರಥಮ ಬಾರಿಗೆ ಆ ಮಾಲ್ (ಮಾಲುಗಳ!!!) ವೀಕ್ಷಣೆಗೆಂದು ಅಲ್ಲಿಗೆ ಹೋಗಿದ್ದೆ. ಹೊಳಗೆ ಹೋದ ಸ್ವಲ್ಪ ಹೊತ್ತಿಗೆ, ನಾನು normal ಇದ್ದೇನಾ ಅನ್ನುವ ಸಂದೇಹಗಳು ನನ್ನಲ್ಲಿ ಮೂಡಲು ಶುರು ಮಾಡಿದವು. ಅಲ್ಲಿ ಬರುವವರ ಜೀವನ ವ್ಯವಸ್ಥೆ, ಅವರ ವೇಷ-ಭೂಷಣ, ಅವರ ಇಂಗ್ಲಿಷ್, ಎಳೆಯದೆ ಬೀಳಲಿಕ್ಕೆ ರೆಡಿ ಇರುವ ಪ್ಯಾಂಟುಗಳು, ಕರೆಂಟ್ ಹೊಡೆದ ಕಾಗೆ ಪುಕ್ಕದ ಹಾಗೆ ಇರೋ ತಲೆ ಕೂದಲು, ಉಬ್ಬು-ತಗ್ಗುಗಳೆನ್ನೇ ತೋರಿಸಲೆಂದು ಹಾಕಿದ್ದಾರೆ ಅನಿಸುವಂತಿರುವ ಹುಡುಗಿಯರ ವೇಷ, ಆ ಹುಡುಗಿಯರ ಬೆಕ್ಕಿನ ನಡಿಗೆ, ಅವರ iphone-iPod ಗಳು, ಆ ಸೇಲ್ಸ್ ಹುಡುಗಿಯರ ಯಾಂತ್ರಿಕ ನಗು, ಆ ವಸ್ತುಗಳ ಬೆಲೆ ನೋಡಿದರೆ ನೂರು ಪಟ್ಟು ದುಬಾರಿ. ಆಬ್ಭಾ, ನನಗೆ ಇದು ನಿಜವಾಗಿಯು ನಮ್ಮ ಕರ್ನಾಟಕವೇ ಎಂಬುವ ಅನುಮಾನ ಶುರುವಾಗಿತ್ತು. ನನಗೆ ಅಲ್ಲಿಂದ ಯಾವಾಗ ಹೊರಗೆ ಹೋಗುತ್ತೇನೆ ಅನ್ನಿಸುತಿತ್ತು. ಆದರೆ ಆ ವಿಷಯವನ್ನು ಸ್ನೇಹಿತರಿಗೆ ಹೇಳಿದರೆ ನನ್ನನ್ನು "not normal" ಅಂತಾ ನಿರ್ದರಿಸುತ್ತಾರೆ ಎಂದು ಸುಮ್ಮನೆ ಅವರೊಡನೆ ಸುತ್ತಾಡುತಿದ್ದೆ.

ಕೊನೆಗೆ ೩ನೆ ಹಂತಸ್ತಿಗೆ ತಲುಪಿದೆವು, ಅದು ಮಕ್ಕಳು ಆಟ ಆಡುವ ಜಾಗ - ಸ್ವಲ್ಪ normal ಅನ್ನಿಸುತಿತ್ತು. ಅಲ್ಲಿ ತುಂಬ ಜನ ಅಪ್ಪ ಅಮ್ಮಂದಿರು ಅವರ ಮಕ್ಕಳಿಗೆ ಆಟ ಆಡಿಸುತಿದ್ದರು. ಸ್ವಲ್ಪ ಸುತ್ತು ಹಾಕಿ ನೋಡಿದೆ, ಎಲ್ಲಾ ಕಂಪ್ಯೂಟರ್ ಆಟಗಳು. ಅವರ ಅಪ್ಪ ಅಮ್ಮಂದಿರು ಮಕ್ಕಳ ಖುಷಿಗಾಗಿ ಅಸ್ಟೊಂದು ಹಣ ಕರ್ಚು ಮಾಡುತಿರುವುದನ್ನು ನೋಡಿ ತುಂಬ ಖುಶಿ ಆಯಿತು. ಮತ್ತೆ ಕೆಳೆಗೆ ಬಂದು ಇನ್ನೊಮ್ಮೆ ಮಾಲ್ ಗಳ ವೀಕ್ಷಣೆ ಮಾಡಿಕೊಂಡು, ಕಣ್ಣನ್ನೆಲ್ಲಾ ಸ್ವಲ್ಪ ತಂಪು ಮಾಡಿಕೊಂಡು ಹೊರಗಡೆ ಬಂದೆವು. ಅಲ್ಲಿ ಏನಾದರು ವ್ಯಾಪಾರ ಮಾಡುವಸ್ಟು ಹಣ ನಮ್ಮ ಬಳಿ ಇರಲಿಲ್ಲ. ಹೊರಗಡೆ ಬಂದು ನನ್ನ ಸುತ್ತ ಮುತ್ತ ಇರುವ ಜನರನ್ನು ನೋಡಿ ತುಂಬ ಮನಸ್ಸಿಗೆ ಸಮಾಧಾನ ಆಯಿತು, ಜೊತೆಗೆ ಒಂದು KSRTC ಬಸ್ ನೋಡಿ ಇದು ಕರ್ನಾಟಕವೇ ಎಂದು ಮನದಟ್ಟಾಯಿತು.

ಅಲ್ಲಿಂದ ಬಂದು ಉಡುಪಿ ಬಸ್ ಹತ್ತಿ ಪ್ರಯಾಣ ಶುರು ಮಾಡಿದೆವು, ಆಗ ನನ್ನ ಮನಸ್ಸಿನಲ್ಲಿ ಒಂದು ಯೋಚನೆ ಕೊರೆಯಲಿಕ್ಕೆ ಶುರು ಮಾಡಿತು - ನಾನು ಚಿಕ್ಕವನಾಗಿದ್ದಾಗ ಯಾವ ಯಾವ ಆಟಗಳನ್ನು ಆಡುತಿದ್ದೆ?, ನನ್ನ ಅಪ್ಪ-ಅಮ್ಮ ಎಷ್ಟು ಹಣ ಖರ್ಚು ಮಾಡುತಿದ್ದರು? ನಾವು ಕೂಡ ಈ ಮಕ್ಕಳ ಹಾಗೆ ನನ್ನ ಬಾಲ್ಯವನ್ನು ಎಂಜಾಯ್ ಮಾಡಿದ್ದೇನಾ?

ನನಗೆ ತಿಳಿದಿರುವ ಹಾಗೆ ನನ್ನ ಅಪ್ಪ-ಅಮ್ಮ ನನ್ನ ಆಟಕ್ಕಾಗಿ ಒಂದು ಬಿಡಿಗಾಸು ಕೂಡ ಖರ್ಚು ಮಾಡಿಲ್ಲ. ನಾವು ಆಡುತಿದ್ದ ಆಟಗಳಿಗೆ ಯಾವುದೇ ಹಣದ ಅವಶ್ಯಕತೆ ಇರಲಿಲ್ಲ. ಯಾವುದೇ ಯಂತ್ರದ ಮೇಲೆ ಅವಲಂಬಿತವಾಗಿರಲಿಲ್ಲ. ನಮ್ಮ ಅಪ್ಪ ಅಮ್ಮ ಯಾವತ್ತು ನಮಗೆ ಆಟ ಅಡಿಸಲಿಕ್ಕೆ ಬರುತ್ತಿರಲಿಲ್ಲ, ರೈತರಾದ ಅವರಿಗೆ ಸಮಯವೇ ಇರುತ್ತಿರಲಿಲ್ಲ. ನಮ್ಮೂರಿನ ಸ್ಥಿತಿ ಈಗಲೂ ಹಾಗೆ ಇದೆ. ನಾವುಗಳು ಆಡುತಿದ್ದ ಆಟಗಳೆಂದರೆ ಬುಗರಿ (ಬಗರಿ), ಗಿಲ್ಲಿ-ದಾಂಡು, ಟಿಕ್ಕಿ, ಕೋಲಾಟ, ಕಳ್ಳ-ಪೋಲಿಸ್, ಕಣ್ಣಾ-ಮುಚ್ಚಾಲೆ, ಚೌಕಾಬರೆ, ಕುಂಟೆ-ಬಿಲ್ಲೆ, ಕಬಡ್ಡಿ, ಮರಕೋತಿ, ಈಜು, ಹಾಗು ಇತರೆ ಸಣ್ಣ ಪುಟ್ಟ ಆಟಗಳು. ನಮಗೆ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್ ಅಂತೆಲ್ಲಾ ಆಟಗಳು ಇದೆ ಅಂಥ ಕೂಡ ಗೊತ್ತಿರಲಿಲ್ಲ, ನನ್ನ ಜೀವನದಲ್ಲಿ ಕ್ರಿಕೆಟ್ ಅಂಥ ಆಟ ಇದೆ ಅಂಥ ತಿಳಿದದ್ದು ಎಂಟನೆ ತರಗತಿಯಲ್ಲಿ ಹಾಗು ಪುಟ್ಬಾಲ್, ಟೆನ್ನಿಸ್ ಬಗ್ಗೆ ತಿಳಿದದ್ದು puc ಯಲ್ಲಿ. ಎತ್ತಿನ ಗಾಡಿಯಲ್ಲಿ ಕೂತು (ಎಮ್ಮೆಯ ಮೇಲೆ ಕೂತು) ರಿಯಲ್ ರೇಸ್ ಮಾಡಿ ಅಭ್ಯಾಸ ಇತ್ತೇ ಹೊರೆತು, ಯಾವುದೇ ಕಂಪ್ಯೂಟರ್ ಕಾರ್ ರೇಸ್ ಬಗ್ಗೆ ಗೊತ್ತಿರಲಿಲ್ಲ. ಯಾವುದೇ ಬೋಟಿಂಗ್ ಮಾಡಿ ಗೊತ್ತಿಲ್ಲದಿದ್ದರೂ ಎಮ್ಮೆ ಅಥವಾ ಎತ್ತಿನ ಮೇಲೆ ಕೂತು (ಈಜು ಬಾರದೆ ಇದ್ದರು, ಕೆಲವೊಮ್ಮೆ ಎಮ್ಮೆಯ ಬಾಲ ಹಿಡಿದುಕೊಂಡು) ಆಳವಾದ ಕೆರೆಯಲ್ಲೆಲ್ಲಾ ಸವಾರಿ ಮಾಡಿದ ಅನುಭವ ಇದೆ.

ಮೇಲಿನ ಯಾವುದೇ ಆಟಗಳಿಗೆ ಹಣದ ಅವಶ್ಯಕತೆ ಇರಲಿಲ್ಲ. ಬುಗರಿ ಹಾಗು ಗಿಲ್ಲಿ-ದಾಂಡು ಆಟದಲ್ಲಿ ನಾನು ನಮ್ಮೂರಿನ ಚಾಂಪಿಯನ್. ನಮ್ಮೂರಿನ ಪ್ರತಿಯೊಬ್ಬ ಹೆಂಗಸರು ಹಾಗು ಅಜ್ಜಂದಿರು ನನಗೆ ಬೈದಿದ್ದಾರೆ ಏಕೆಂದರೆ ಪ್ರತಿಯೊಬ್ಬರ ಮನೆ ಹೆಂಚಿಗು ಚಿನ್ನಿ (ಮರದ ತುಂಡು)ಯಿಂದ ಹೊಡೆದು ತೂತು ಮಾಡಿರುತಿದ್ದೆ. ಇನ್ನು ಟಿಕ್ಕಿ ಆಟ ಊರಿನ ಬೀದಿಯಲ್ಲಿ ಬಿದ್ದಿರುವ ಸಿಗರೇಟು ಪ್ಯಾಕೇಟು ಹಾಗು ಬೆಂಕಿ ಪೊಟ್ಟಣದ ತುಂಡುಗಳಿಂದ ಆಡುತಿದ್ದ ಆಟ. ಕಳ್ಳ-ಪೋಲಿಸ್ ಆಟ ಒಂದು ಭಯಾನಕ ಆಟ, ಏಕೆಂದರೆ ಈ ಆಟದಲ್ಲಿ ಕಳ್ಳ ಆದವರು ಊರಿನ ಯಾವುದೇ ಮನೆಗೆ ಹೋಗಿ ಅವಿತುಕೊಳ್ಳಬಹುದಿತ್ತು, ಪೋಲಿಸ್ ಆದವನು ಊರಿನ ಎಲ್ಲಾ ಮನೆಗಳನ್ನು ಹುಡುಕಬೇಕಿತ್ತು - ಕೆಲವೊಮ್ಮೆ ಒಂದೊಂದು ದಿನ ಹುಡುಕುವುದರಲ್ಲೇ ಕಳೆದು ಹೋಗುತಿತ್ತು. ಚೌಕಾಬರೆ ಆಟ, ಇದು ಚೆಸ್ ವಿಧವಾದ ಆಟ ಅಂಥ ಹೇಳಬಹುದು, ತುಂಬ ಚತುರತೆಯಿಂದ ಆಡಬೇಕಾದ ಆಟ - ಇದಕ್ಕೆ ಬೇಕಾದ ಕವಡೆಗಳನ್ನು ನಾವು ಹುಣಸೆ ಬೀಜದ ಒಂದು ಭಾಗವನ್ನು ತೆವೆದು ಬೆಳ್ಳಗೆ ಮಾಡಿಕೊಂಡು ಅವುಗಳಲ್ಲಿ ಆಡುತಿದ್ದೆವು. ಮರಕೋತಿ ಆಟವನ್ನು ಆಡಲಿಕ್ಕೆ ಹೋಗಿ ತುಂಬ ಸಲ ಕೈ ಕಾಲಿಗೆ ಪೆಟ್ಟು ಮಾಡಿಕೊಳ್ಳುತಿದ್ದೆವು. ಕಬಡ್ಡಿ ಹಾಗು ಈಜು ಸ್ವಲ್ಪ ದೊಡ್ಡವರಾದ ಮೇಲೆ ಆಡಲಿಕ್ಕೆ ಶುರು ಮಾಡಿದ ಆಟಗಳು, ಜೊತೆಗೆ ತುಂಬ ಎಂಜಾಯ್ ಮಾಡಿದ ಆಟಗಳು. ಇವತ್ತಿಗೂ ನಮ್ಮೂರಿನ ಕೆರೆಯ ಹತ್ತಿರ ಹೋದರೆ ಡೈವ್ ಹೊಡೆಯುವ ಅಂಥ ಅನ್ನಿಸುತ್ತದೆ.

ಈಗಿನ ಪಟ್ಟಣದಲ್ಲಿ ಜೀವನ ಮಾಡುವವರು ಎಷ್ಟೇ ಹಣ ಖರ್ಚು ಮಾಡಿದರು, ನಮ್ಮಂಥ ಹಳ್ಳಿ ಹುಡುಗರ ಹಾಗೆ ಜೀವನವನ್ನು ಸವಿಯಲು ಸಾಧ್ಯ ಇಲ್ಲಾ, ಅದು ಯಾವುದೇ ರೀತಿಯಲ್ಲೂ ಹಣ ವ್ಯಯ ಮಾಡದೆ. ಈ ಎಲ್ಲಾ ಆಟಗಳ ಜೊತೆಗೆ ಬೇರೆ ತುಂಟಾಟಗಳನ್ನೂ ಮಾಡುತಿದ್ದೆವು ಅವುಗಳ ಬಗ್ಗೆ ಮತ್ತೊಮ್ಮೆ ಸಮಯ ಸಿಕ್ಕಾಗ ಬರೆಯುತ್ತೇನೆ.

Friday, September 11, 2009

ಭಾಗ-೩:ನಾನೇ ನಮ್ಮೂರಿನ ಯುವಗೌಡ!

ನಾನು ಕೊನೆಯ ಅಂಕಣದಲ್ಲಿ ಹೇಳಿದ ಹಾಗೆ ನಮ್ಮೂರಿನ ಶಾಲೆಗೆ ಒಬ್ಬರೇ ಶಿಕ್ಷಕರು. ನಾನು ಶಾಲೆಗೆ ಸೇರಿದ ಸಮಯದಲ್ಲಿ ನಾಗರಾಜು ಎಂಬ ಶಿಕ್ಷಕರಿದ್ದರು, ಅವರಿಗೆ ಸರಿ ಸುಮಾರು ೪೫-೫೦ ವರ್ಷ ವಯಸ್ಸಾಗಿತ್ತು. ಜೀವನದಲ್ಲಿ ಕೇವಲ ಸಂಬಳಕ್ಕಾಗಿ ಕೆಲಸ ಮಾಡುತಿದ್ದ, ನನ್ನಂತ ಹಳ್ಳಿ ಹುಡುಗರ ಉದ್ದಾರ ಮಾಡುವ ಯಾವುದೇ ಹುಮ್ಮಸ್ಸು ಇಲ್ಲದ ಒಬ್ಬ ವ್ಯಕ್ತಿ. ಅವರು ನಮ್ಮ ಪಕ್ಕದ ಊರಿನವರು, ನಮ್ಮೂರಿನಿಂದ ಅವರ ಊರಿಗೆ ಹೆಚ್ಚು ಕಮ್ಮಿ ೮ ಕಿ ಮಿ. ಮೇಸ್ಟ್ರು ದಿನಾ ಸೈಕಲ್ ಮೇಲೆ ಬರುತಿದ್ದರು, ಬಂದು ನಮ್ಮೂರಿಗೆ ಬಂದು ತಲುಪುವಷ್ಟರಲ್ಲಿ ಪೂರ್ತಿ ಸುಸ್ತಾಗಿ ಹೋಗಿರುತಿದ್ದರು, ಹಾಗಾಗಿ ಬಂದು ಆರಾಮಾಗಿ ನಿದ್ದೆ ಮಾಡಿ ಹೋಗುತಿದ್ದರು.

ಮೇಸ್ಟ್ರಿಗೆ ನನ್ನ ಮೇಲೆ ತುಂಬ ಪ್ರೀತಿ ಹಾಗಾಗಿ ಶಾಲೆಗೆ ಹೋದ ತಕ್ಷಣ ಕೆರೆದು ನನ್ನ ಯೋಗಕ್ಷೇಮ ವಿಚಾರಿಸಿ, ಜೊತೆಗೆ ಅಂದು ನಮ್ಮನೇಲಿ ಉಟಕ್ಕೆ ಏನು ಮಾಡಿದ್ದರೆ ಎಂದು ಕೇಳುತಿದ್ದರು. ಏನಾದರು ಅವರಿಗೆ ಇಷ್ಟ ಇದ್ದ ಸಾಂಬಾರ್ ಏನಾದ್ರೂ ಮಾಡಿದ್ದರೆ (ಕೋಳಿ ಸಾರು ಅಂದ್ರೆ ಅವರಿಗೆ ತುಂಬ ಇಷ್ಟ ಇತ್ತು) ಅಂತ ಏನಾದ್ರು ಹೇಳಿದರೆ ಸಾಕು. ಏನಾದ್ರೂ ನೆಪ ಮಾಡಿಕೊಂಡು ನಮ್ಮ ಮನೆಗೆ ಹೋಗುತಿದ್ದರು. ನಮ್ಮ ಮನೆಗೆ ಬಂದವರಿಗೆ ಊಟ ಬಡಿಸದೆ ಕಳಿಸುತ್ತಿರಲಿಲ್ಲ, ಹಾಗಾಗಿ ಭರ್ಜರಿ ಸೇವೇ ಮಾಡಿಸಿಕೊಂಡು, ಜೊತೆಗೆ ತರಕಾರಿ, ಕಾಳು-ಕಡ್ಡಿ ಎಲ್ಲಾ ತುಂಬಿಕೊಂಡು ಬರುತಿದ್ದರು.

ನಾನು ಮೊದಲನೇ ತರಗತಿಗೆ ಸೇರಿದಾಗ, ನಮ್ಮ ಮೇಸ್ಟ್ರು ಶಾಲೆಗೆ ಬರೋದೇ ೧೧ ಅಥವಾ ೧೨ ಗಂಟೆ ಆಗಿರುತಿತ್ತು. ಬಂದು ಒಂದು ಗಂಟೆ ಅ ಆ ಇ ಈ ಕಲಿಸಿಕೊಡುತಿದ್ದರು, ನಂತರ ಊಟಕ್ಕೆ. ಮಧ್ಯಾನ ೧ ೨ ೩ ೪ ಹೇಳಿಕೊಟ್ಟು ೪ ಗಂಟೆಗೆ ಜಾಗ ಕಾಲಿ ಮಾಡಿ ಹೋಗುತಿದ್ದರು. ನನ್ನ ಮೊದಲಿನ ಎರಡು ವರ್ಷದಲ್ಲಿ ಅವರು ಹೇಳಿಕೊಟ್ಟಿದ್ದು, ನಾವು ಕಲಿತಿದ್ದು ಇದು ಎರಡೇ. ಈ ಎರಡು ವರ್ಷ ಕೂಡ ನಾನು ಯಾವುದೇ ಪುಸ್ತಕ, ನೋಟ್ ಬುಕ್, ಪೆನ್ ಏನು ತೆಗೆದು ಕೊಲ್ಲದೆ ಕೇವಲ ಸ್ಲೇಟ್ & ಚಾಪಿಸ್ ( ಸುಣ್ಣದ ಬಳಪ)ನಲ್ಲೆ ಮುಗಿಸಿದೆ. ಇತ್ತೀಚಿಗೆ ಮಕ್ಕಳಿಗೆ optional ಪರೀಕ್ಷೆ ಕೊಡಲು ಸರ್ಕಾರ ತೀರ್ಮಾನಿಸಿದೆ ಅಂಥಾ ಯಾವುದೊ ನಿಯತಕಾಲಿಕೆಯಲ್ಲಿ ಓದಿದೆ, ಆದರೆ ನಮಗೆ ಆ ಸಮಯದಲ್ಲೇ ಈ ವ್ಯವಸ್ಥೆ ಇತ್ತು. ನಮಗೆ ಯಾವುದೇ ಪರೀಕ್ಷೆ ಅಗಲಿ, ಕಿರು ಪರೀಕ್ಷೆ ಆಗಲೀ ಇರುತ್ತಿರಲಿಲ್ಲ. ಆದರೆ ಪಲಿತಾಂಶದ ದಿನ ಎಲ್ಲಾ ಹುಡುಗರು ಶಾಲೆಗೆ ಹೋಗುತಿದ್ದೆವು, ಅಂದು ಮೇಸ್ಟ್ರು ಎಲ್ಲರನ್ನು ಸಾಲಿನಲ್ಲಿ ಕೂರಿಸಿ, ಒಬ್ಬೊಬ್ಬರನ್ನಾಗಿ ಕರೆದು ಅವನ ಮುಖ ನೋಡಿ ಅವನು ಉತ್ತಿರ್ಣ ಅಥವಾ ಅನುತ್ತಿರ್ಣ ಎಂದು ನಿರ್ದರಿಸುತಿದ್ದರು. ಆ ದಿನ ಯಾರು ಶಾಲೆಗೇ ಬರೋದಿಲ್ಲ ಅವರುಗಳೆಲ್ಲ ಅನುತ್ತಿರ್ಣ. ನಾನು ಊರಿನ ಗೌಡರ ಮಗ ಆಗಿದ್ದರಿಂದ ನನ್ನನ್ನು ಅನುತ್ತಿರ್ಣ ಮಾಡುವ ದ್ಯೈರ್ಯ ಮೇಸ್ಟ್ರು ಮಾಡುತ್ತಿರಲಿಲ್ಲ!.

ರಾಜಕೀಯ ಪ್ರವೇಶ:
ನಾನು ಶಾಲೆಗೆ ಸೇರಿದ ವರ್ಷ ನನ್ನ ಅಣ್ಣ ಕೂಡ ಅದೇ ಶಾಲೆಯಲ್ಲಿ ನಾಲ್ಕನೆ ತರಗತಿಯಲ್ಲಿ ಓದುತಿದ್ದ, ಅವನು ಶಾಲೆಯ ಲೀಡರ್, ಮೇಸ್ಟ್ರು ನಿದ್ದೆ ಮಾಡುವಾಗಿ ಯಾರು ಗಲಾಟೆ ಮಾಡಿ ಹೆಚ್ಚರ ಮಾಡದಂತೆ ನೋಡಿಕೊಳ್ಳುವುದು ಅವನ ಕೆಲಸ. ನಮ್ಮೂರಿನಲ್ಲಿ ಕೇವಲ ನಾಲ್ಕನೆ ತರಗತಿಯವರೆಗೆ ಮಾತ್ರ ಇದ್ದುದದರಿಂದ, ಅವನು ನಾನು ಎರಡನೇ ತರಗತಿಗೆ ಬಂದಾಗ ಅವನು ಶಾಲೆಯಲ್ಲಿ ಇರಲಿಲ್ಲ. ಆಗ ಮೇಸ್ಟ್ರು ಲೀಡರ್ ಕೆಲಸಕ್ಕೆ ಒಬ್ಬ ಉತ್ತರಾದಿಕಾರಿಯನ್ನು ನೇಮಿಸ ಬೇಕಾಗಿ ಬಂತು. ಆಗ ಅವರಿಗೆ ಊರಿನ ಗೌಡರ ಮಗನಾದ ನನ್ನನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಲು ಮನಸಾಗದೆ ನನ್ನನ್ನೇ ಲೀಡರ್ ಮಾಡಿದರು. ರಾಜಕೀಯ ನನ್ನ ರಕ್ತದಲ್ಲೇ ಇತ್ತು ಅಂತ ಕಾಣುತ್ತೆ. ಯಾರಾದರು ನನ್ನ ಮಾತು ಕೇಳದೆ ಇದ್ದರೇ, ಯಾರಾದರು ನನಗೆ ಇಷ್ಟ ಇಲ್ಲದಿದ್ದರೆ, ನನಗೆ ಚಾಪಿಸು (ಸುಣ್ಣದ ಬಳಪ - chalk piece) ಲಂಚ ಕೊಡದೆ ಇದ್ದರೇ, ಅವರ ಹೆಸರುಗಳನ್ನು ಮೇಸ್ಟ್ರು ಒಂದು ಸುತ್ತು ನಿದ್ದೆ ಮಾಡಿ ಎದ್ದ ತಕ್ಷಣ ಹೇಳಿ ಒದೆ ಕೊಡಿಸುತಿದ್ದೆ. ಹಾಗಾಗಿ ಊರಿನ ಹುಡುಗರೆಲ್ಲ ನನಗೆ ಹೆದರುತಿದ್ದರು. ಆದರೆ ಮಂಜುಳಾ ಅನ್ನೋ ಹುಡುಗಿ ಅಂದ್ರೆ ಏನೋ ಒಂಥರಾ ಇಷ್ಟ (ಯಾಕೆ ಅಂತ ಇನ್ನು ಕೂಡ ಗೊತ್ತಿಲ್ಲ) ಆಗುತಿದ್ದಳು, ಅವಳು ಮತ್ತು ನನ್ನ ತಮ್ಮ (ಬಂಗಾರಿ) ಎಷ್ಟು ಗಲಾಟೆ ಮಾಡಿದ್ರು ಕೂಡ ಮೇಸ್ಟ್ರಿಗೆ ಹೇಳುತ್ತಿರಲಿಲ್ಲ.

ನಾನು ಮೂರನೇ ತರಗತಿಗೆ ಹೋದಾಗ ನಾಗರಾಜ ಮೇಸ್ಟ್ರಿಗೆ ವರ್ಗಾವಣೆ ಆಗಿತ್ತು. ಯಾದವರಾಜ್ ಎಂಬ ಯುವ ಮೇಸ್ಟ್ರು ನಮ್ಮೂರಿಗೆ ಬಂದಿದ್ದರು. ಆವರಿಗೆ ಬಡ ರೈತರ ಮಕ್ಕಳಿಗೆ ಕಲಿಸಬೇಕು, ಉದ್ದಾರ ಮಾಡಬೇಕು ಎಂದು ತುಂಬಾ ಆಸೆ ಮತ್ತು ಹುಮ್ಮಸ್ಸು ಇತ್ತು. ಬಂದ ಕೆಲವೇ ದಿನಗಳಲಿ, ನೆಲದ ಮೇಲೆ ಕೂರುತಿದ್ದ ನಮಗೆ ಮಣೆಗಳ ಮೇಲೆ ಕೂರುವ ವ್ಯವಸ್ಥೆ ಮಾಡಿಸಿದರು. ಕಾಗುಣಿತ, ಮಗ್ಗಿ, ಗಣಿತ (ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ) ಹೇಳಿ ಕೊಟ್ಟು. ಸ್ವಲ್ಪ ಓದು-ಬರೆಯುವುದನ್ನು ಅಭ್ಯಾಸ ಮಾಡಿಸುತಿದ್ದರು.

ಶಿಕ್ಷಕರ ಹುಮ್ಮಸ್ಸು ಕೂಡ ತುಂಬ ದಿನಾ ಉಳಿಯಲಿಲ್ಲ. ಅವರು ಕೆಳ ವರ್ಗಕ್ಕೆ ಸೇರಿದವರೆಂದು ತಿಳಿದ ಮೇಲೆ ನಮ್ಮೂರಿನ ಅನಕ್ಷರಸ್ಥ ದಡ್ಡ ಜನ ಅವರನ್ನು ಕೀಳಾಗಿ ಮಾತನಾಡಿಸಲು ಶುರು ಮಾಡಿದರು. ಒಬ್ಬ ಶಿಕ್ಷಕರಿಗೆ ಸಿಗಬೇಕಾದ ಮರ್ಯಾದೆಅವರಿಗೆ ಸಿಗುತ್ತಿರಲಿಲ್ಲ. ನಮಗೆಲ್ಲಾ ಅವರನ್ನು ಮುಟ್ಟದೆ ಇರೋ ಹಾಗೆ ಸೂಚನೆ ನೀಡುತಿದ್ದರು.

ಒಂದು ದಿನ ನಾನು ಹಾಗು ನನ್ನ ಸೋದರ ಅತ್ತೆಯ ಮಗ ತಮ್ಮಣ್ಣ (ಪ್ರೀತಿಯ ಹೆಸರು "ಡಬ್ಬಾ ") ಶಾಲೆಗೇ ಹೋಗಿದ್ದೆವು, ಮೇಸ್ಟ್ರು ಏನೋ ಹೇಳಿಕೊಡುತಿದ್ದಾಗ ನಾವಿಬ್ಬರೂ ಮಾತಾಡುತ್ತ ಕುಳಿತಿದ್ದೆವು, ಅವರಿಗೆ ಸಿಟ್ಟು ಬಂದು ನಮ್ಮಿಬ್ಬರನ್ನು ಕರೆದರು, ನಾನು ಮೊದಲು ಹೋದೆ. ನನಗೆ ಒಂದು ಒದೆ ಕೊಟ್ಟು ಕೂರಲಿಕ್ಕೆ ಹೇಳಿದರು, ಅವನನ್ನು ಕರೆದು ಒಂದು ಒದೆ ಕೊಟ್ಟರು. ಆದರೆ ಅವನಿಗೆ ತುಂಬ ಸಿಟ್ಟು ಬಂದು ಕೈಲಿದ್ದ ಸ್ಲೇಟ್ ನಿಂದ ಅವರ ಮುಖಕ್ಕೆ ಜೋರಾಗಿ ಹೊಡೆದು ಮನೆಗೆ ಹೊಡಿ ಹೋದ. ಮತ್ತೆಂದು ಅವನು ಶಾಲೆ ಕಡೆ ತಿರುಗಿ ನೋಡಲಿಲ್ಲ, ಮತ್ತು ನಮ್ಮ ತಂದೆ-ತಾಯಿಯರಿಗೆ ಮಕ್ಕಳನ್ನು ತಿದ್ದಿ, ಬುದ್ದಿ ಹೇಳಿಶಾಲೆಗೇ ಕಳಿಸುವಸ್ಟು ಬುದ್ದಿ ಹಾಗು ಸಮಯ ಇರಲಿಲ್ಲ. ಇವತ್ತು ಊರಲ್ಲಿ ಎಮ್ಮೆ ಮೇಯಿಸಿಕೊಂಡು ಜೀವನ ಮಾಡುತಿದ್ದಾನೆ. ನಾನೇನಾದರು ದಿನ ಅವನು ಮಾಡಿದ ಕೆಲಸ ಮಾಡಿದ್ದರೆ, ಇವತ್ತು ನಾನು ಕೂಡ ಅವನ ಜೊತೆ ಎಮ್ಮೆ ಮೇಯಿಸುತಿದ್ದೆ.

ಇನ್ನೊಂದು ದಿನ ಲೀಲಾವತಿ ಅನ್ನೋ ಹುಡುಗಿಗೆ ಅ ಆ ಇ ಈ ಹೇಳಲಿಕ್ಕೆ ಬರಲಿಲ್ಲ ಅಂಥ ಮೇಸ್ಟ್ರು ಶಿಕ್ಷಿಸುತಿದ್ದರು, ಆ ಹುಡುಗಿ ತಪ್ಪಿಸಿಕೊಳ್ಳಲು ಹೋಗಿ ಅವಳ ರಟ್ಟೆಯ ಮೇಲೆ ಒದೆ ಬಿದ್ದು ಬಾರುಸುಂಡೆ (swelling) ಬಂದು ಬಿಟ್ಟಿತು. ಅದೇ ಸಮಯದಲ್ಲಿ ಅವರ ಅಪ್ಪ ಹೊನ್ನಣ್ಣ, ಜಮೀನಿನ ಕೆಲಸ ಮುಗಿಸಿ ಮನೆಗೆ ಹೋಗುತಿದ್ದರು. ಆ ಹುಡುಗಿ ಹೊಡಿ ಹೋಗಿ ತಂದೆಗೆ ಆ ಬಾರುಸುಂಡೆ ತೋರಿಸಿದಳು. ಅವರಪ್ಪ ಸೀದಾ ಶಾಲೆಗೇ ಬಂದು, ಏನು ಕೇಳದೆ ಕೈಯಲ್ಲಿದ ಗೆಡ್ಡಗೊಲು (ದನಗಳಿಗೆ ಒಡೆಯಲು ರೈತರು ಬಳಸುವ ಬಿದಿರಿನ ತುಂಡು)ನಿಂದ ಮೇಸ್ಟ್ರಿಗೆ ಎರಡು ಕೊಟ್ಟರು. ಮೇಸ್ಟ್ರು ವಿಧಿ ಇಲ್ಲದೆ ಶಾಲೆಯಿಂದ ಹೊರಗಡೆ ಹೊಡಿ ಹೋದರು. ಆದರು ಬಿಡದೆ ಅವರನ್ನು ಹಿಂಬಾಲಿಸಿಕೊಂಡು ಹೋದರು ಹೊನ್ನಣ್ಣ, ಅವರಿಂದೆ ನಾವೆಲ್ಲ ನಗುತ್ತ ಹೊಡಿ ಹೋಗುತಿದ್ದೆವು. ಮೇಸ್ಟ್ರು ಸೀದಾ ನಮ್ಮ ಮನೆಯ ಹತ್ತಿರ ಹೊಡಿ ಹೋಗಿ ನನ್ನ ತಂದೆ ಹತ್ತಿರ ಕೇಳಿಕೊಂಡರು. ಆಗ ನಮ್ಮಪ್ಪ ಹೊನ್ನಣ್ಣನಿಗೆ ಸಮಾಧಾನ ಮಾಡಿ ಕಳುಯಿಸಿ ಕೊಟ್ಟರು. ಆ ಹುಡುಗಿಯ ವಿಧ್ಯಾಭ್ಯಾಸ ಕೂಡ ಅವತ್ತಿಗೆ ಕೊನೆಗೊಂಡಿತು.

ಮೇಸ್ಟ್ರಿಗೆ ಇದನ್ನೆಲ್ಲಾ ಸಹಿಸಿಕೊಳ್ಳಲು ಆಗದೆ ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೊರಟು ಹೋದರು. ನಮ್ಮೂರಿಗೆ ಮತ್ತೊಬ್ಬ ನಿದ್ದೆ ಗುರುಗಳು ಬಂದು ಸೇರಿಕೊಂಡರು.

ಪ್ರೀತಿಯಿಂದ
ಗೌಡ




Saturday, September 5, 2009

ಜೀವನವೆಂಬ ಇಸ್ಪೀಟು ಆಟ!


ಬುದ್ದಿ ಜೀವಿಗಳು ಜೀವನವನ್ನು ತುಂಬಾ ಆಟಗಳಿಗೆ ಹೋಲಿಸುತ್ತಾರೆ, ಅವುಗಳಲ್ಲಿ ಚಂದುರಂಗದಾಟ ಮುಖ್ಯವಾದದ್ದು. ನನಗೆ ಚದುರಂಗದಾಟದ ಬಗ್ಗೆ ಏನು ತಿಳಿಯದ ಕಾರಣ, ನನಗೆ ಆ ಹೋಲಿಕೆಗಳು ಅರ್ಥ ಆಗೋದು ಅಷ್ಟಕ್ಕೆ ಅಸ್ಟೆ. ಹಾಗಾಗಿ ನನಗೆ ತಿಳಿದಿರುವ, ನನಗೆ ಸರಿಯಾಗಿ ಅರ್ಥ ಆಗುವ "ಇಸ್ಪೀಟು" ಆಟಕ್ಕೆ ಜೀವನವನ್ನು ಹೋಲಿಕೆ ಮಾಡಿಕೊಂಡು ಅರ್ಥ ಮಾಡಿಕೊಳ್ಳೋದು ನನ್ನ ಅಭ್ಯಾಸ.

ನಾವುಗಳೆಲ್ಲಾ ಈ ಪ್ರಪಂಚಕ್ಕೆ ಕಾಲಿಟ್ಟಾಗ, ನಮ್ಮ ಜೀವನದ ಆಟಕ್ಕೆ ಬೇಕಾಗುವಸ್ಟು "ಇಸ್ಪೀಟು ಎಲೆ"ಗಳನ್ನೂ ದೇವರು (ಯಾರು ಅಂಥ ಇನ್ನು ಸರಿಯಾಗಿ ತಿಳಿದಿಲ್ಲಾ, ಹುಡುಕಾಟ ಇನ್ನು ನನ್ನೊಳಗೆ ನಡೆಯುತ್ತಿದೆ) ಕೊಟ್ಟು ಕಳಿಸಿರುತ್ತಾನೆ. ಅವುಗಳಲ್ಲಿ ತುಂಬಾ "ಜೋಕರ್"ಗಳು ಕೂಡ ಇರುತ್ತವೆ. ಜೊತೆಗೆ ಬೇಕಾದಾಗ ಒಂದೊಂದಾಗಿ ನಮ್ಮ ಸರತಿ ಬಂದಾಗ ತೆಗೆದು ಕೊಳ್ಳಲು ತುಂಬಾ ಎಲೆಗಳನ್ನು ಆಟಗಾರರ ನಡುವೆ ಈ ಪ್ರಪಂಚದಲ್ಲಿ ಇಟ್ಟಿರುತ್ತಾನೆ, ಇದರಲ್ಲಿ ಕೂಡ "ಜೋಕರ್"ಗಳು ಸಿಗಬಹುದು.

ಮಾನವನ ಜೀವನ ಕೇವಲ ಈ ಎಲೆಗಳನ್ನು ಸರಿಯಾಗಿ ಕೂಡಿಸಿಕೊಂಡು ಆಡುವ ಆಟ. ನಾವು ಚಿಕ್ಕವರಾಗಿದ್ದಾಗ ದೇವರು ನಮ್ಮ ಅಪ್ಪ-ಅಮ್ಮ-ಗುರುಗಳ ರೂಪದಲ್ಲಿ ನಮಗೋಸ್ಕರ ಆಟ ಆಡಿಸಿ ತೋರಿಸಿ ಕೊಡುತ್ತಾನೆ, ಒಮ್ಮೆ ನಮಗೆ ನಿರ್ಧಾರ ಮಾಡುವ ಶಕ್ತಿ ಬಂದ ತಕ್ಷಣ ಎಲ್ಲಾ ಎಲೆಗಳನ್ನು ನಮ್ಮ ಕೈಗೆ ಕೊಟ್ಟು ಆಟ ಮುಂದುವರಿಸಲು ಹೇಳಿ ಹೋಗ್ತಾನೆ. ತದ ನಂತರ ನಮ್ಮ ಜೀವನದಲ್ಲಿ ಏನೇ ಏರು-ಪೆರು ಆದರೂ ಅದಕ್ಕೆ ನಾವುಗಳೇ ನೇರ ಹೊಣೆ. ನಾವುಗಳು ಯಾವುದೂ ಜೋಕರ್, ಯಾವುದು ಸಾಮನ್ಯ ಎಲೆ ಅಂಥ ನಿರ್ಧಾರ ಮಾಡಿಕೊಂಡು ಅವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಬೇಕು, ಅದುವೇ ಜೀವನದಲ್ಲಿ ಸಂತೋಷವಾಗಿರಲು ಬೇಕಾಗಿರುವ ಮೂಲ ಮಂತ್ರ. ನಮ್ಮ ಜೀವನದಲ್ಲಿ ಜೊತೆಗೆ ಆಡುವವರು ಕೇವಲ ಅವರಿಗೆ ಬೇಕಿಲ್ಲದ ಎಲೆಗಳನ್ನು ನಿಮ್ಮತ್ತ ಎಸೆಯುತ್ತಿರುತ್ತಾರೆ. ಕೆಲವೋಮ್ಮೆ ನಿಮಗೆ ಬೇಕಾದ ಎಲೆ ಸಿಗಬಹುದು ಮತ್ತೆ ಕೆಲವೋಮ್ಮೆ ಸಿಗದೇ ಕೂಡ ಇರಬಹುದು, ಮತ್ತೆ ಕೆಲವರು ತಿಳಿಯದೆ ನಿಮಗೆ ಬೇಕಾದ ಎಲೆಗನ್ನೇ ಎಸೆಯಬಹುದು, ಅದೆಲ್ಲಾ ಕೇವಲ ನಿಮ್ಮ "ಲಕ್" ಮೇಲೆ ನಿರ್ಣಯ ಆಗ್ತದೆ. ಅವರುಗಳು ನಿಮಗೆ ಎಸೆದ ತಕ್ಷಣ ಆ ಎಳೆಯನ್ನು ನೀವು ತೆಗೆದುಕೊಳ್ಳಲೇಬೇಕು ಎಂದೆನಿಲ್ಲಾ. ನಿಮಗೆ ಆ ಎಲೆ ಬೇಕಿಲ್ಲದಿದ್ದಲ್ಲಿ, ಆಟಗಾರರ ಮಧ್ಯೆ ಇರುವ ಕಂತೆಯಿಂದ ಒಂದು ಎಲೆ ತೆಗೆದು ನಿಮ್ಮ ಹಣೆಬರಹ ಪರೀಕ್ಷೆ ಮಾಡಿಕೊಳ್ಳಬಹುದು. ಇದೆಲ್ಲಾದರ ಜೊತೆಗೆ ನೀವು ಕೂಡ ಸರಿಯಾಗಿ ಯೋಚನೆ ಮಾಡಿ ಯಾವುದು ಎಲೆ ನಿಮಗೆ ಸರಿಯಾಗಿ ಕೂಡಿ ಬರಲ್ಲ, ಆ ಎಲೆಯನ್ನು ಬೇರೆಯವರ ಕಡೆ ಎಸೆಯಲೇ ಬೇಕು, ಇಲ್ಲಿ ನಿಮ್ಮ ಬುದ್ದಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲೇ ಬೇಕು, ಇಲ್ಲದಿದ್ದರೆ ಆಟದಲ್ಲಿ ಗೆಲುವು ಸಿಗೋದು ಕಷ್ಟ.

ಯಾವ ಆಟವನ್ನು (ಇಸ್ಪೀಟ್ ಆಟದಲ್ಲೇ ತುಂಬಾ ವಿಧಗಳಿವೆ), ಯಾವ ರೀತಿಯಲ್ಲಿ, ಯಾವ ಎಲೆಗಳನ್ನು ಕೂಡಿಸಿ ಆಡುತ್ತಾರೆ ಅನ್ನೋದು ಅವರವರ ವಿವೇಕತೆಗೆ ಬಿಟ್ಟ ವಿಷಯ. ಕೆಲವರು ಎಲ್ಲಾ "ಜೋಕರ್" ಎಲೆಗಳನ್ನು ಜೀವನದ ಪ್ರಥಮ ಹಂತದಲ್ಲೇ ಉಪಯೋಗಿಸಿ ಕೊನೆಗೆ ಆಟ ಮುಗಿಯುವ ಮುನ್ನವೇ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಕೆಲವರು ಎಲ್ಲಾ "ಜೋಕರ್"ಗಳನ್ನೂ ಕೊನೆವರೆಗೆ ಉಳಿಸಿಕೊಳ್ಳುವುದರಲ್ಲೇ ಜೀವನ ವ್ಯರ್ಥ ಮಾಡುತ್ತಾರೆ ಹಾಗೂ ಕೊನೆಗೆ ಕೇವಲ "ಜೋಕರ್"ಗಳನ್ನೇ ಉಳಿಸಿಕೊಂಡು, ಒಟ್ಟಿಗೆ ಉಪಯೋಗಿಸಿ, ಆಟದ ನಿಜವಾದ ಮಜಲನ್ನೇ ಅನುಭವಿಸದೇ ಹೊರಟು ಹೋಗುತ್ತಾರೆ. ಇನ್ನೂ ಕೆಲವರು ಈ "ಜೋಕರ್"ಗಳ ಮಹತ್ವ ತಿಳಿಯದೆ ಬೇರೆ ಎಲೆಗಳ ತರಾನೆ ಉಪಯೋಗಿಸಿ, "ಜೋಕರ್"ಗಳನ್ನೂ ವ್ಯರ್ಥ ಮಾಡುತ್ತಾರೆ. ಯಾರು ಈ "ಜೋಕರ್"ಗಳ ಮಹತ್ವ ತಿಳಿದು, ಜೊತೆಗೆ ಸಾಮನ್ಯ ಎಲೆಗಳನ್ನು ಕೂಡ ಸರಿಯಾಗಿ ಕೂಡಿಸಿ ಆಡುತ್ತಾರೋ ಅವರುಗಳು ಮಾತ್ರ ಈ ಆಟದಲ್ಲಿ ಗೆಲ್ಲಲು ಸಾಧ್ಯ.

ಜೀವನದ ಈ ಆಟದಲ್ಲಿ ನಿಮಗೆ ಗೆಲ್ಲಲಾಗದಿದ್ದರೆ ಅದಕ್ಕೆ ನೀವೇ ನೇರ ಹೊಣೆ. ಬೇರೆ ಯಾರನ್ನು ದೂಷಿಸಲಾಗುವುದಿಲ್ಲ. ಏಕೆಂದರೆ ಎಲ್ಲಾರು ಅವರವರ ಆಟವನ್ನು ಆಡುವುದರಲ್ಲಿಯೇ ಮನಸ್ಸನ್ನು ಕೇಂದ್ರಿಕರಿಸಿರುತ್ತಾರೆ. ನನ್ನ ಜೀವನದಲ್ಲಿ ಅವನಿಂದ ಈಗೆ ಆಯಿತು ಮತ್ತೆ ಇವನಿಂದ ಈಗೆ ಆಯಿತು ಎಂದು ಸಬೂಬು ಕೊಡುವ ತುಂಬ ಜನರನ್ನು ನೋಡಿದ್ದೇನೆ, ಅವರುಗಳಿಗೆಲ್ಲ ನನ್ನ ಚಿಕ್ಕ ಪ್ರಶ್ನೆ : ಅವರು ಎಸೆದ ಎಲೆಗಳನ್ನು ಯೋಚನೆ ಮಾಡದೇ ತೆಗೆದುಕೊಂಡು ಮಾಡಿದ ತಪ್ಪು ನಿಮ್ಮದೇ ತಾನೆ?. ಹಾಗಾಗಿ ಜೀವನದಲ್ಲಿ ನಮ್ಮ ಸೋಲುಗಳಿಗೆ, ತಪ್ಪುಗಳಿಗೆ, ಬೇರೆಯವರ ಕಡೆ ಬೊಟ್ಟು ಮಾಡಿ ತೋರಿಸುವುದನ್ನು ಬಿಟ್ಟು, ನಮ್ಮ ಆಟವನ್ನು ಸರಿಯಾಗಿ ಚಾಣಾಕ್ಷತನದಿಂದ ಆಡುವುದನ್ನು ಕಲಿಯೋಣ. ಜೊತೆಗೆ ಒಮ್ಮೆ ಕೆಳಗೆ ಎಸೆದ ಎಲೆಯನ್ನು ಪುನಃ ತೆಗೆದು ಕೊಳ್ಳಲು ಈ ಆಟದಲ್ಲಿ ಸಾಧ್ಯ ಇಲ್ಲ, ಅದ್ದರಿಂದ ಎಸೆದ ಎಲೆಯ ಬಗ್ಗೆ ಯೋಚನೆ ಮಾಡಿ ಕೊರುಗೋ ಬದಲು, ಮುಂದಿನ ಎಲೆಯನ್ನು ಎಚ್ಚರದಿಂದ ನಡೆಸುವ ಬಗ್ಗೆ ಯೋಚನೆ ಮಾಡೋಣ.

ನಿಮ್ಮೆಲ್ಲರ ಜೀವನದ ಆಟಕ್ಕೆ ನನ್ನ ಶುಭಾಕಾಂಕ್ಷಿಗಳು.

ಪ್ರೀತಿಯಿಂದ
ಗೌಡ.

Saturday, August 29, 2009

ಭಾಗ - ೨ - ನನ್ನ ಮಾದರಿ ಪ್ರೈಮರಿ ಶಾಲೆಯ ಬಗ್ಗೆ ...

ಕಳೆದ article ನಲ್ಲಿ ನಾನು ಶಾಲೆಗೆ ಸೇರಿದ "ಮಿಸ್ಟರಿ" ಬಿಡಿಸಿ ತಿಳಿಸಿದ್ದೆ, ಇವತ್ತು ನನ್ನ ಶಾಲೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮದು ಒಂದೇ ಒಂದು ಕೂಣೆಯ ಶಾಲೆ. ಸುತ್ತ ಮುತ್ತ ಶಾಲೆಯೇ ಕಾಣದ ಹಾಗೆ ಬೆಳೆದಿದ್ದ ದೊಡ್ಡ ಕಳ್ಳಿ ಬೇಲಿ, ಆ ಬೇಲಿಯ ಸುತ್ತ ಊರಿನ ಎಮ್ಮೆಗಳೆನ್ನೆಲ್ಲ ಕಟ್ಟಿ ಹಾಕಿರುತಿದ್ದರು. ಯಾರಾದರು ಊರಿಗೆ ಹೊಸದಾಗಿ ಮೇಸ್ಟ್ರು ಬಂದರೆ ಅವರಿಗೆ ಶಾಲೆಗೆ ಹೋಗಲಿಕ್ಕೆ ದಾರಿ ಹುಡುಕೋದೇ ದೊಡ್ಡ ಕೆಲಸ. ದಾರಿಯಲ್ಲೆನಾದ್ರು ಎಮ್ಮೆ ನಿಂತಿದ್ದರಂತೂ ಹೊಳಗೆ ಹೋಗೋದು ಆಸಾದ್ಯ.

ಶಾಲೆಯ ಬಲ ಭಾಗಕ್ಕೆ ದೇವಿ ಮಂದಿರ (ಕಳ್ಳಬಟ್ಟಿ ಮಾರುವವರ ಮನೆ, ಆ ಸಮಯದಲ್ಲಿ ನಮ್ಮೂರಿನಲ್ಲಿ ಕಳ್ಳಬಟ್ಟಿ ಮಾರುವುದು "ಲೀಗಲ್ ಬಿಸಿನೆಸ್"), ಕುಡುಕರು ದೇವಿ ಪರವಶವಾಗಿ ಹೇಳುತಿದ್ದ ದೇವರ ಕೀರ್ತನೆಗಳೆಲ್ಲ ನಮಗೆ ಸರಿಯಾಗಿ ಕೆಳಿಸುತಿದ್ದವು. ಇನ್ನು ಎಡ ಭಾಗಕ್ಕೆ ಸ್ವಲ್ಪ ಬಯಲು ಮತ್ತು ಒಂದು ಕೆರೆ ಇತ್ತು, ಆದರೆ ಆ ಬಯಲು ನಮ್ಮೊರಿನ "ಪಬ್ಲಿಕ್ ಓಪನ್ ಟಾಯ್ಲೆಟ್" ಆಗಿತ್ತು. ಶಾಲೆಯ ಸುತ್ತ ಕಳ್ಳಿ ಬೇಲಿ ಇದ್ದುದರಿಂದ ಆ "ಓಪನ್ ವ್ಯೂ "ನಿಂದ ನಾವುಗಳು ವಂಚಿತರಾಗುತಿದ್ದೆವು. ಇನ್ನು ಶಾಲೆಯ ಎದುರುಗಡೆ ಒಂದು ಗುಡಿಸಲು ಮನೆ ಇತ್ತು, ಆದೂ ನಮ್ಮೊರಿನ ಪ್ರಸಿದ್ದ "ಕ್ಲಬ್", ಅಲ್ಲಿ ನಮ್ಮೊರಿನ ಶ್ರಮ ಜೀವಿಗಳೆಲ್ಲ ಕೂತು "ಇಸ್ಪೀಟು" ಆಟವಾದುತಿದ್ದರು, ಅವರುಗಳು ಒಂದರಿಂದ ಸಾವಿರಗಳ ತನಕ ಬೀಡಿಗಳನ್ನು ಬೆಟ್ಟಿಂಗ್ ಮಾಡಿ ಆಡುತ್ತಾ ಇದ್ದರು, ನಾವುಗಳು ಸಮಯ ಸಿಕ್ಕಾಗ ಆ ಶ್ರಮ ಜೀವಿಗಳಿಗೆ ಬೀಡಿ ತಂದುಕೊಡುವ ರೂಪದಲ್ಲಿ ಆ ಕ್ಲಬ್ ಗೇ ಅಳಿಲು ಸೇವೆ ಸಲ್ಲಿಸುತಿದ್ದೆವು. ನಮ್ಮ ಶಾಲೆ ಹಿಂದುಗಡೆ ತಿಪ್ಪೆ ಗಳ (ಹಳ್ಳಿಗಳಲ್ಲಿ ರೈತರು ದನಗಳ ಸಗಣಿ ಮತ್ತು ಕಸವನ್ನು ಹಾಕುವ ಗುಂಡಿಗಳು - ರಸ ಗೊಬ್ಬರ ತಯಾರು ಮಾಡುವ ಕೇಂದ್ರಗಳು)ಸಾಲು. ನಮ್ಮ ಶಾಲೆಯಲ್ಲಿ ಯಾವಾಗಲು ಸುವಾಸನೆ ಹರಿದಾದುತಿರುತಿತ್ತು, ಎಡಭಾಗದಿಂದ ಗಾಳಿ ಬೀಸಿದರೆ ಆ ಬಯಲಿನ (ಪಬ್ಲಿಕ್ ಓಪನ್ ಟಾಯ್ಲೆಟ್) ಸುವಾಸನೆ, ಬಲಗಡೆಯಿಂದ ಬೀಸಿದರೆ ದೇವಿ ಬಕ್ತರ ತೀರ್ಥದ ಸುವಾಸನೆ, ಹಿಂದುಗಡೆಯಿಂದ ಬೀಸಿದರೆ ತಿಪ್ಪೆಗಳಲ್ಲಿ ಕರಗಿ ಗೊಬ್ಬರವಾಗುತ್ತಿರುವ ಸಗಣಿಯ ಸುವಾಸನೆ. ಇದು ಸಾಲದೆಂಬಂತೆ ಶಾಲೆಯ ಸುತ್ತ ಕಟ್ಟಿದ ಎಮ್ಮೆಗಳು ಹಾಕುವ ತಾಜಾ ಗಂಜಲು ಮತ್ತು ಸಗಣಿಯ ಸುವಾಸನೆ.

ಇನ್ನು ಒಂದು ಕುತೂಹಲಕಾರಿ ವಿಚಾರ ಅಂದ್ರೆ, ನಮ್ಮೂರಿನಲ್ಲಿ ಯಾವುದೇ ಮದುವೇ ಅದರೂ ಅಂದು ನಮಗೆ ರಜಾ. ನಾವೆಲ್ಲ ಮದುವೆ ನೋಡಲಿ ಅಂಥ ಏನು ರಜಾ ಕೊಡ್ತಾ ಇರಲಿಲ್ಲಾ, ನಮ್ಮೂರಿನಲ್ಲಿ ಮದುವೆ ಗಂಡನ್ನು "ಬಿಡದಿ" (ಮದುವೆಯ ಹಿಂದನ ರಾತ್ರಿಯೇ ಮದುವೆಯ ಗಂಡು ಊರಿಗೆ ಬಂದು ಮದುವೆ ಮುಗಿಯುವವರೆಗೂ ಒಂದು ಬೇರೆ ಮನೆಯಲ್ಲಿ ಉಳಿದುಕೊಳ್ಳಬೇಕು, ಇದು ಒಂದು ಶಾಸ್ತ್ರ) ಬಿಡಲಿಕ್ಕೆ ನಮ್ಮ ಶಾಲೆಯನ್ನೇ ಉಪಯೋಗಿಸುತಿದ್ದರು, ಅದ್ದರಿಂದ ನಮಗೆ ಆ ದಿನ ಶಾಲೆಗೆ ರಜಾ. ಆದರೆ ಮದುವೆಯ ಮರು ದಿನ ನಾವುಗಳು ಬಂದು ಶಾಲೆಯನ್ನು ಸ್ವಚ್ಛ ಮಾಡಬೇಕಿತ್ತು, ಮದುವೆಯ ಬಿಟ್ಟಿ ಊಟಕ್ಕೆ ತೆರಬೇಕಾದ ದಂಡ.

ಇಸ್ಟೆಲ್ಲಾ ಅಲ್ಲದೆ ನಮ್ಮ ಶಾಲೆ ಒಂದು ಥರಾ ನಿರಾಶ್ರಿತರ ಶಿಬಿರ ಕೂಡ. ಆ ಸಮಯದಲ್ಲಿ ನಮ್ಮೋರಿಗೆ "ಹಕ್ಕಿಸಿಕ್ಕಾರು" ಬರುತಿದ್ದರು. ಹಕ್ಕಿಸಿಕ್ಕಾರು ಅಂದ್ರೆ ಆ ಸಮಯದಲ್ಲಿ ತೊಗಲುಗೊಂಬೆ ಆಟ ತೋರಿಸಲಿಕ್ಕೆ ಬರುತಿದ್ದವರು. ಇವರುಗಳು ತಿಂಗಳುಗಟ್ಟಲೆ ಊರಿನಲ್ಲಿ ಉಳಿದುಕೊಂಡು ಬಿಕ್ಷೆ ಮಾಡಿ ಜೀವನ ಮಾಡುತಿದ್ದರು, ಒಂದು ದಿನ ಊರಿನವರಿಗೆಲ್ಲ ತೊಗಲುಗೊಂಬೆ ಆಟ ತೋರಿಸುತಿದ್ದರು. ಇವರುಗಳ ವಾಸ್ತವ್ಯ ನಮ್ಮ ಶಾಲೆಯ ಜಗಲಿ ಮೇಲೆ, ಇವರುಗಳು ಎಲ್ಲಾ ಪಕ್ಷಿಗಳನ್ನು ಬೇಟೆ ಮಾಡಿ ತಂದು ತಿನ್ನುತಿದ್ದರು, ಅದಕ್ಕೋಸ್ಕರ ಇವರಿಗೆ ಹಕ್ಕಿಸಿಕ್ಕಾರು ಎಂದು ಕರೆಯುತಿದ್ದರು. ಇವರುಗಳ ಜೊತೆಗೆ ಊರಿಗೆ ಬರಿತಿದ್ದ ಎಲ್ಲಾ ಬಿಕ್ಶುಕರಿಗೂ ಇದೆ ವಾಸ ಸ್ತಳ.

ಇದೆಲ್ಲಾ ಶಾಲೆಯ ಹೊರಗಡೆಯ ವಾತಾವರಣದ ವಿವರಗಳಾದರೆ, ಇನ್ನು ಶಾಲೆಯ ಹೊಳಗಡೆ, ನಮ್ದು "ನಾವೆಲ್ಲರೂ ಒಂದೇ" ಎಂಬ ವಾಕ್ಯವನ್ನು ಚಾಚು ತಪ್ಪದೆ ಪಾಲಿಸುತಿದ್ದ ಶಾಲೆ. ಒಂದರಿನ ನಾಲ್ಕನೇ ತರಗತಿಯವರೆಗೂ ಸರಿ ಸುಮಾರು ೪೦-೫೦ ವಿಧ್ಯಾಥಿಗಳು ಇರುತಿದ್ದೆವು, ನಮಗೆಲ್ಲಾ ಒಬ್ಬರೇ ಮೇಸ್ಟ್ರು (ನಮ್ಮೂರಿನ ಶಾಲೆಯ ಇತಿಹಾಸದಲ್ಲಿ ಒಬ್ಬ ಮೇಡಂ ಕೂಡ ಬಂದಿಲ್ಲಾ!!!, ಯಾಕೆ ಅಂಥ ನಂತರ ಹೇಳ್ತೇನೆ), ನಾವೆಲ್ಲ ಒಂದೇ ಕೋಣೆಯಲ್ಲಿ ಕುಳಿತು ಕುಳಿತುಕೊಳ್ಳುತಿದ್ದೆವು, ನಮಗೆಲ್ಲಾ ಒಂದೇ ಪಾಠ. ಸರಳ ಜೀವನವನ್ನು ಚಿಕ್ಕ ವಯಸ್ಸಿನಲ್ಲೇ ಪಾಲಿಸುವಂತೆ ಮಾಡಿದ್ದರು, ಯಾವುದೇ ಕುರ್ಚಿ ಮೇಜಿನ ಆಡಂಬರ ಇರಲಿಲ್ಲಾ, ಮೇಸ್ಟ್ರಿಗೆ ಒಂದು ಕುರ್ಚಿ ಮತ್ತು ಒಂದು ಮೇಜು, ಜೊತೆ ಬಂದ ಅಥಿತಿಗಳಿಗೆ ಒಂದು ಮೇಜು ಇತ್ತು ಅಸ್ಟೆ, ನಾವುಗಳೆಲ್ಲ ನೆಲದ ಮೇಲೆ ಕೂರಬೇಕಿತ್ತು (ಸ್ವಲ್ಪ ಸಮಯದ ನಂತರ ಕೂರಲಿಕ್ಕೆ ಮಣೆಗಳನ್ನು ತರಿಸಿದರು ನಮ್ಮ ಮೇಸ್ಟ್ರು). ಜೊತೆಗೆ ಸರ್ವ ಧರ್ಮ ಪರಿ ಪಾಲಿಸಲೆಂದು ಯಾವುದೇ ಸಮವಸ್ತ್ರದ ಅಗತ್ಯ ಇರಲಿಲ್ಲಾ, ಜೈನ ಧರ್ಮ ಪಾಲಿಸುವವರಿಗೆ ಸಹಾಯ ಆಗಲೆಂದು ಚಡ್ಡಿ ಹಾಕುವ ಅಗತ್ಯ ಕೂಡ ಇರಲಿಲ್ಲಾ.

ಇನ್ನು ಶಾಲೆ ಬರುತಿದ್ದವರೆಲ್ಲ "ಪಾರ್ಟ್ ಟೈಮ್ ಜಾಬ್" ಮಾಡುತಿದ್ದವರೇ, ದನ, ಎಮ್ಮೆ ಕಾಯೋದು, ಮನೆಗೆ ಕೆರೆಯಿಂದ ನೀರು ತರುವುದು, ಅಪ್ಪಂಗೆ ಬೀಡಿ ತಂದು ಕೊಡೋದು, ಅವ್ವಂಗೆ ಎಲೆ-ಅಡಿಕೆ-ಕಡ್ಡಿಪುಡಿ ತಂದು ಕೊಡೋದು, ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ತಗೊಂಡು ಹೋಗೋದು, ದನಗಳಿಗೆ ನೀರು ಕುಡಿಸಿ, ಮೇವು ಹಾಕೋದು, ಕುಡುಕ ಅಪ್ಪಂದಿರಿಗೆ ದೇವಿ ಮಂದಿರದಿಂದ ದೇವಿ ತೀರ್ಥ ತಂದು ಕೊಡೋದು, "ಕ್ಲಬ್"ನಲ್ಲಿದ್ದ ಶ್ರಮ ಜೀವಿಗಳಿಗೆ ಬೆಟ್ಟಿಂಗ್ ಮಾಡಲಿಕ್ಕೆ, ಬೀಡಿ ತಂದು ಕೊಡೋದು, ದಾರಿಯಲ್ಲಿ ಬಿದ್ದಿದ್ದ ಸಗಣಿಯನ್ನು ತೆಗೆದು ತಿಪ್ಪೆಗೆ ಹಾಕೋದು, ಅಡುಗೆ ಮಾಡಲಿಕ್ಕೆ ಗುಡ್ಡಕ್ಕೆ ಹೋಗಿ ಸೌದೆ ತರುವುದು, ಇನ್ನು ಇತರೆ ಚಿಲ್ಲರೆ ಕೆಲಸಗಳನ್ನು ಮಾಡಲೇ ಬೇಕಿತ್ತು. ಹಾಗಾಗಿ ನಮ್ಮ ಶಾಲೆಯಲ್ಲಿ "flexible timing" ವ್ಯವಸ್ಥೆ ಇತ್ತು , ಯಾರು ಯಾವಾಗ ಬೇಕಾದರು ಬರಬಹುದಿತ್ತು, ಯಾವಾಗ ಬೇಕಾದ್ರೂ ಹೋಗಬಹುದಿತ್ತು, ಯಾರನ್ನು (ಮೇಸ್ಟ್ರನ್ನು ಕೂಡ) ಕೇಳುವ ಅಗತ್ಯ ಕೂಡ ಇರಲಿಲ್ಲಾ. ಹಾಗೂ ನಮ್ಮ ಅಪ್ಪ ಅವ್ವಂದಿರೆಲ್ಲ ಬೇಕಾದಾಗ ಬಂದು ನಮ್ಮನ್ನ ಕರೆದುಕೊಂಡು ಹೋಗುವ ಸೌಲಬ್ಯ ಕೂಡ ಇತ್ತು. ಹಾಗಾಗಿ ನಮ್ಮ ಶಾಲೆ ಶುರು ಆಗ್ತಾ ಇದ್ದದ್ದು ೧೧ ಅಥವಾ ೧೨ಕ್ಕೆ, ಊಟಕ್ಕೆ ೧ ಗಂಟೆಗೆ ಬಿಡುತಿದ್ದರು, ಮತ್ತೆ ಮಧ್ಯಾನದ ತರಗತಿಗಳು ಶುರು ಆಗ್ತಾ ಇದ್ದದ್ದು ೨.೩೦ - ೩ ಗಂಟೆಗೇ, ಕೊನೆಗೆ ೪ ಗಂಟೆಗೆ ತರಗತಿಗಳು ಮುಗಿಯುತ್ತ ಇದ್ದವು.

ನಮ್ಮೂರು ಹಳೆಬೀಡಿನಿಂದ ೫ ಕಿಮಿ, ಆ ಸಮಯದಲ್ಲಿ ಒಂದು ಬಂಡಿ ಗಾಡಿಯ ರಸ್ತೆ ಬಿಟ್ಟರೆ ಯಾವುದೇ ರಸ್ತೆ ಇರಲಿಲ್ಲ. ಎತ್ತಿನ ಬಂಡಿ ಬಿಟ್ಟು ಬೇರೆ ಯಾವುದೇ ವಾಹನ ಬರಲಿಕ್ಕೆ ಸಾಧ್ಯನೇ ಇರಲಿಲ್ಲ, ವಿಮಾನ ಹೊರೆತುಪಡಿಸಿ!. ನಮ್ಮೋರಿಗೆ ಮೇಸ್ಟ್ರು ನಡೆದುಕೊಂಡು ಅಥವಾ ಸೈಕಲ್ ಮೇಲೆ ಬರಬೇಕಿತ್ತು. ಅದಕ್ಕೆ ಯಾರಾದರು ಮೇಡಂಗೆ ನಮ್ಮೋರಿಗೆ ವರ್ಗಾವಣೆ ಆದರೆ ಅವರುಗಳು ಕೆಲಸ ಬಿಟ್ಟು ಹೋಗುತಿದ್ದರು ಅಥವಾ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡು ಹೋಗುತಿದ್ದಾರೆ ಹೊರೆತು ನಮ್ಮೋರಿಗೆ ಬರುತ್ತಿರಲಿಲ್ಲ. ಶಿಕ್ಷಕರು ಬೆಳಗ್ಗೆ ಎಷ್ಟು ಬೇಗ ಮನೆ ಬಿಟ್ಟರು ಶಾಲೆ ತಲುಪುತಿದ್ದದ್ದು ೧೧-೧೨ರ ಸುಮಾರು, ಜೊತೆಗೆ ಕತ್ತಲೆಯಲ್ಲಿ ಕಾಡಿನೊಳಗೆ ನಡೆದುಕೊಂಡು ಹೋಗಲು ಹೆದರಿ ೪ ಗಂಟೆಗೆ ಶಾಲೆ ಮುಗಿಸಿ ಹೋಗುತಿದ್ದರು.

ಇವತ್ತಿಗೆ ಇಷ್ಟು ಸಾಕು, ಮುಂದಿನ article ನಲ್ಲಿ ಮೇಸ್ಟ್ರು ಏನೇನು ಕಲಿಸುತಿದ್ದರು ಹಾಗೂ ನಾವುಗಳು ಹೇಗೆ ಉತೀರ್ಣರಾಗುತಿದ್ದೆವು ಎಂಬುದರ ಬಗ್ಗೆ ತಿಳಿಸಿ ಹೇಳುತ್ತೇನೆ.

ಪ್ರೀತಿಯಿಂದಾ
ಗೌಡ

Thursday, August 27, 2009

ನಾನೇ ಬೇರೆ, ನನ್ನ ಇತಿಹಾಸವೇ ಬೇರೆ! ಭಾಗ-೧

ನನ್ನ ಪ್ರೈಮರಿ ವಿಧ್ಯಾಭ್ಯಾಸದ ಬಗ್ಗೆ ಒಂದಿಸ್ಟು ಮಾಹಿತಿ. ನಾನು ನನ್ನ ಪ್ರೈಮರಿ ವಿಧ್ಯಾಭ್ಯಾಸ ಮಾಡಿದ್ದೂ ನನ್ನ ಹುಟ್ಟುರಾದ ಗೌರಿಕೊಪ್ಪಲಿನಲ್ಲಿ, ಅದರ ಬಗ್ಗೆ ಈಗ ಕೂತು ಯೋಚನೆ ಮಾಡಿದ್ರೆ ನಗು ಬರ್ತದೆ ಹಾಗೂ ಆಶ್ಚರ್ಯ ಕೂಡ ಆಗ್ತದೆ. ನಾನು ಒಂದನೇ ತರಗತಿಯಿಂದ ನಾಲ್ಕನೆ ತರಗತಿಯಲ್ಲಿ ಮಾಡಿದ ಕೆಲವು ಗದ್ಲಗಳನ್ನು ಹೇಳ್ತೇನೆ ಕೇಳಿ.

ಒಂದು ದಿನ ನಾನು (೫ ವರ್ಷ) ಮತ್ತು ನನ್ನ ಅತ್ತೆಯ ಮಗ ಎತ್ತಿನ ಗಾಡಿಯ ಕೆಳಗೆ ಮಣ್ಣಿನಲ್ಲಿ ಮನೆ ಮಾಡಿಕೊಂಡು ಆಟವಾಡ್ತಾ ಇದ್ವಿ. ನಮ್ಮಪ್ಪ ಜಮೀನಿನಲ್ಲಿ ಕೆಲಸ ಮುಗ್ಸಿ, ನೇಗಿಲು ಒತ್ತ್ಕೊಂಡು ಬಂದ್ರು. ನಾನು ಮಣ್ಣಿನಲ್ಲಿ ಆಟವಾಡುತ್ತಿರುವುದನ್ನು ನೋಡಿ ತುಂಬ ಸಿಟ್ಟು ಬಂತು, ಏಕೆಂದರೆ ಅವಾಗ ನಂಗೆ ಕಾಲಿನಲ್ಲಿ ತುಂಬ ಗಾಯಗಳಿದ್ದವು, ಅವುಗಳು ಜೋರಗ್ತವೆ ಅಂಥ. ಹತ್ತಿರ ಬಂದು ಕೈಲಿದ್ದ ಗೆಡ್ಡಗೊಲಿನಿನ್ದ (ರೈತರು ಎತ್ತುಗಳಿಗೆ ಒಡೆಯಲು ಇಟ್ಟುಕೊಳ್ಳುವ ಬಿದಿರು ಮರದ ತುಂಡು) ಎರಡು ಕೊಟ್ಟು ಮನೆಗೆ ಕರೆದು ಕೊಂಡು ಹೋದರು.

ಮನೆಗೆ ಬಂದು ಅವ್ವಂಗೆ (ಅಮ್ಮ) ನನ್ನ ಮಣ್ಣಿನಲ್ಲಿ ಆಡಲಿಕ್ಕೆ ಬಿಟ್ಟಿದ್ದಕ್ಕೆ ಬೈಲಿಕ್ಕೆ ಶುರು ಮಾಡಿದರು. ಅವ್ವಂಗು ಸಿಟ್ಟು ಬಂದು "ನಾನು ಎಷ್ಟು ಹೇಳಿದ್ರು ಅವನು ಕೇಳಲ್ಲ, ಇಲ್ಲಿ ಕೆಲ್ಸ ಮಾಡೋದು ಬಿಟ್ಟು ಎಷ್ಟು ಹೊತ್ತು ಅಂಥ ಅವನ್ನ ನೋಡ್ತಾ ಕೂರಲಿ, ಅತ್ಲಾಗಿ ಇಸ್ಕೂಲಿಗದ್ರು (ಸ್ಕೂಲ್) ಸೇರಿಸಬಾರದ, ಅಲ್ಲಿ ಮೇಸ್ಟರಾದ್ರು ಮಣ್ಣಿಗೆ ಹೋಗದ ಹಾಗೆ ಸರಿಯಾಗಿ ನೋಡ್ಕೋತಾರೆ" ಅಂಥ ಹೇಳಿದ್ರು. ಆಗ ನಮ್ಮಪ್ಪಂಗೆ ನನ್ನ ಶಾಲೆಗೆ ಸೇರಿಸಬೇಕು ಎಂಬ ಜವಾಬ್ದಾರಿಯ ಅರಿವಾಯಿತು. ಈಗಾಗಿ ಮಣ್ಣಿನಲ್ಲಿ ಆಟವಾಡುವುದನ್ನು ತಡೆಯಲಿಕ್ಕೆ ನನ್ನ ಶಾಲೆಗೆ ಸೇರಿಸಿದರು. ಈ ನೆಪದಲ್ಲಿ ನನ್ನನ್ನು ಶಾಲೆಗೆ ಸೇರಿಸಲು ಪರೋಕ್ಷವಾಗಿ ನಾನೇ ಕಾರಣವಾಗಿದ್ದೆ - ನಾನು ನಾನೇ!.

ಆದೇ ಸಿಟ್ಟಲ್ಲಿ ನಮ್ಮಪ್ಪ, ತಕ್ಷಣ ನನ್ನ ಕರೆದು ಕೊಂಡು ಶಾಲೆಯ ಕಡೆ ಹೊರಟರು. ಆಗ ಅವರು ಜಮೀನಿನಲ್ಲಿ ಕೆಲಸ ಮಾಡಲಿಕ್ಕೆ ಹಾಕಿದ ಬಟ್ಟೆಯಲ್ಲೇ ಇದ್ದರು (ಬನಿಯನ್ ಅಂಡ್ ಪಟ್ಟೆ ಚಡ್ಡಿ ), ನಾನು ಒಂದು ಅಂಗಿ ಹಾಕಿಕೊಂಡಿದ್ದೆ, ಆದ್ರೆ ಚಡ್ಡಿ ಮಾತ್ರ ಇಲ್ಲಾ!. ಶಾಲೆಗೆ ಹೋದ ನಂತರದ ಸಂಭಾಷಣೆ
ಮೇಸ್ಟ್ರು : ಬನ್ನಿ ಗೌಡ್ರೆ, ಅಪರೂಪಕ್ಕೆ ಶಾಲೆ ಕಡೆ ಬಂದಿದ್ದಿರಿ, ಏನು ಸಮಾಚಾರ?
ಅಪ್ಪ: ಏನಿಲ್ಲ ಮೇಸ್ಟ್ರೆ, ಈಗೆ ನಮ್ಮ ಹುಡುಗನ್ನ ಶಾಲೆಗೆ ಸೇರಿಸುವ ಅಂಥ ಬಂದೆ.
ಮೇಸ್ಟ್ರು : ಯಾರು? ಇವನು, ಚಿಕ್ಕವನಲ್ಲಾ ಗೌಡ್ರೆ...?
ಅಪ್ಪ: ಇಲ್ಲಾ ಮೇಸ್ಟ್ರೆ, ಇವನಿಗೆ ಇಸ್ಕೂಲಿಗೆ ಸೇರುವ ವಯಸ್ಸಾಗಿದೇ, ಸ್ವಲ್ಪ ಕುಳ್ಳ, ನನ್ನ ಹಾಗೆ ಅಸ್ಟೇ.
ಮೇಸ್ಟ್ರು: ಬಾರೋ ಇಲ್ಲಿ, ನಿನ್ನ ಒಂದು ಕಡೆಯ ಕೈಯಿಂದ ಇನ್ನೊಂದು ಕಡೆಯ ಕಿವಿ ಇಡ್ಕೋ.
[ನಮ್ಮೂರಲ್ಲಿ ಒಬ್ಬ ಹುಡುಗ ಶಾಲೆಗೆ ಸೇರಲು eligible ಇದ್ದನೋ ಇಲ್ವೋ ಅಂಥ ತೀರ್ಮಾನ ಮಾಡಲು ಉಪಯೋಗಿಸುತಿದ್ದ ಮಾನದಂಡ, ಆದರೆ ನನ್ನ ಕಿವಿ ಮುಟ್ಟಲಿಕ್ಕೆ ನಂಗೆ ಆಗಲೇ ಇಲ್ಲಾ]
ಮೇಸ್ಟ್ರು: ನೋಡ್ರಿ ಗೌಡ್ರೆ, ಇವನಿಗೆ ಕಿವಿ ಮುಟ್ಟಲು ಆಗಲ್ಲ, ಇವನಿನ್ನೂ ಚಿಕ್ಕವನು ಗೌಡ್ರೆ
ಅಪ್ಪ: ಇಲ್ಲಾ ಮೇಸ್ಟ್ರೆ, ಹೇಳಿದನಲ್ಲಾ ಇವನು ಸ್ವಲ್ಪ ಕುಳ್ಳ ನನ್ನ ಹಾಗೆ, ವಯಸ್ಸಾಗಿದೆ ಇವನಿಗೆ
ಮೇಸ್ಟ್ರು: ಎಷ್ಟು ವಯಸ್ಸು ಇವನಿಗೆ?
ಅಪ್ಪ: ಒಂದು ಐದಾರು ವರ್ಷ ಆಗಿರಬೇಕು
ಮೇಸ್ಟ್ರು: ಹುಟ್ಟಿದ ದಿನಾಂಕ ಇಲ್ವಾ ಗೌಡ್ರೇ
ಅಪ್ಪ: ಯಾರಿಗೆ ಗೊತ್ತು ಮೇಸ್ಟ್ರೆ, ಅದೆಲ್ಲಾ ಯಾರು ನೆನಪಿನಲ್ಲಿ ಇಟ್ಕೋತಾರೆ
ಮೇಸ್ಟ್ರು: ರೂಲ್ಸ್ ಪ್ರಕಾರ ಇಷ್ಟು ಸಣ್ಣ ಹುಡುಗರನ್ನೆಲ್ಲಾ ಶಾಲೆಗೆ ಸೇರಿಸಿಕೊಂಡರೆ ನಮ್ಮನ್ನ ಜೈಲಿಗೆ ಹಾಕ್ತರೆ ಗೌಡ್ರೇ
ಅಪ್ಪ: ಅದೆಲ್ಲ ಗೊತ್ತಿಲ್ಲ ಮೇಸ್ಟ್ರೆ, ಸೇರಿಸಿಕೊಳ್ಳಲೇ ಬೇಕು, ಇವನನ್ನು ಮನೆಯಲ್ಲಿ ನೋಡ್ಕೊಳೋಕೆ ಕಷ್ಟ ಆಗ್ತಿದೆ
ಮೇಸ್ಟ್ರು: ಅದ್ರೂ
ಅಪ್ಪ (ಸಿಟ್ಟಲ್ಲಿ): ರೀ ಮೇಸ್ಟ್ರೆ ಸುಮ್ನೆ ಜಾಸ್ತಿ ಮಾತು ಬೇಡ, ಸುಮ್ನೆ ಸೇರಿಸ್ಕೊಳ್ಳಿ
[ನಮ್ಮಪ್ಪ ನಮ್ಮೊರಿನ ಗೌಡ್ರು, ಊರಲ್ಲಿ ಏನೇ ಜಗಳ ಅದರೂ ನಮ್ಮಪ್ಪನೆ ತೀರ್ಮಾನ ಮಾಡುತಿದ್ದುದು, ಹಾಗಾಗಿ ಯಾರು ತಿರುಗಿ ಹೇಳುತ್ತಿರಲಿಲ್ಲ]
ಮೇಸ್ಟ್ರು (ಹೆದರಿ): ಆಯಿತು ಗೌಡ್ರೇ, ಏನು ಹೆಸರು?
ಅಪ್ಪ: ತೋಟೆ ಗೌಡ
ಮೇಸ್ಟ್ರು: ಹುಟ್ಟಿದ ದಿನಾಂಕ?
ಅಪ್ಪ: ಗೊತ್ತಿಲ್ಲ ಅಂಥ ಹೇಳಿದನಲ್ಲ
ಮೇಸ್ಟ್ರು: ಇಲ್ಲಿ ಬರ್ಕೊಬೇಕು, ಒಂಚೂರು ಊಹೆ ಮಾಡಿ ಹೇಳಿ ಗೌಡ್ರೇ
ಅಪ್ಪ: ಇವನು ಸಂಕ್ರಾಂತಿ ಮತ್ತು ಶಿವರಾತ್ರಿ ಹಬ್ಬದ ನಡುವಿನ ದಿನಗಳಲ್ಲಿ ಹುಟ್ಟಿದ್ದು , ಅಲ್ಲಿ ಒಂದು ದಿನ ಗೊತ್ತು ಮಾಡಿ
ಮೇಸ್ಟ್ರು: ೪-೩-೮೩ ಅಂಥ ಬರೆಯಲಾ?
[ಈಗಾಗಿ ನನ್ನ ಹುಟ್ಟಿದ ದಿನಾಂಕವನ್ನು ನನ್ನ ಪ್ರೈಮರಿ ಶಾಲೆಯ ಮೇಸ್ಟ್ರು ತೀರ್ಮಾನಿಸಿದರು]
ಅಪ್ಪ: ಆಯಿತು ಬರೀರಿ
ಮೇಸ್ಟ್ರು: ಹೋಗೋ ತೋಟೆ ಗೌಡ, ಅಲ್ಲಿ ಮೊದಲನೆ ಮಣೆ ಮೇಲೆ ಕೂರು
ಅಪ್ಪ: ಏನಾದ್ರು ಹಣ ಕೊಡಬೇಕ ಮೇಸ್ಟ್ರೆ?
ಮೇಸ್ಟ್ರು: ಇಲ್ಲಾ ಗೌಡ್ರೇ, ನಿಮ್ಮ ಹತ್ರ ಹಣ ಹೇಗೆ ತಗೋಳೋದು.
[೧೨ರ ಸಮಯ ]
ಅಪ್ಪ: ಮತ್ತೆ ಊಟ ಮಾಡಲಿಕ್ಕೆ ಬರ್ತಿರಾ ಮೇಸ್ಟ್ರೆ, ಬಸ್ಸಾರು ಮತ್ತು ರಾಗಿ ಮುದ್ದೆ.
ಮೇಸ್ಟ್ರು: ಸರಿ ಗೌಡ್ರೇ, ಎಲ್ಲಾ ಊಟಕ್ಕೆ ಹೋಗಿ ಬನ್ನಿ ಮಕ್ಕಳೇ.
[ಕೂತು ಐದು ನಿಮಿಷ ಆಗಿಲ್ಲಾ, ಊಟದ ಸಮಯ. ತಂದೆ ಮತ್ತು ಮೇಸ್ಟ್ರು ಜೊತೆ ನಾನು ಕೂಡ ಊಟಕ್ಕೆ ಹೋದೆ]

ಮುಂದುವರೆಯುವುದು.....

Sunday, August 23, 2009

"College Life is Golden Life" ಅನ್ನೋದು ಎಷ್ಟು ಸರಿ?

ಕಾಲೇಜಿಗೆ ಬರುವ ತುಂಬಾ ಹುಡುಗರೂ (ಮತ್ತು ಹುಡುಗಿಯರೂ) ಅಪ್ಪ/ಅಮ್ಮ ಅಣ್ಣ/ತಮ್ಮ ಅಕ್ಕ/ತಂಗಿ ಯರನ್ನೆಲ್ಲ ಬಿಟ್ಟು ಬೇರೊಂದು ಊರಿಗೆ ಬಂದು ಹಾಸ್ಟೆಲ್ ಅಥವಾ ರೂಮ್ ಮಾಡಿಕೊಂಡು ಜೀವನ ಮಾಡ್ಲಿಕ್ಕೆ ಶುರು ಮಾಡ್ತಾರೆ.

ಹೊಸ ಜಾಗ, ಹೊಸ ಜನ, ಹೊಸ ಪರಿಸರ ಅದಕ್ಕೆಲ್ಲಾ ಹೊಂದಿಕೊಂಡು ಹೋಗಲೇ ಬೇಕು. ಮನೆಯಲ್ಲಿ ಇದ್ದಾಗ ಸಿಕ್ಕಿದ, ವಾತ್ಸಲ್ಯಕ್ಕೆ ಅಮ್ಮ, ಬುದ್ದಿವಾದಕ್ಕೆ ಅಪ್ಪ, ಪ್ರೀತಿಸಲಿಕ್ಕೆ ಅಕ್ಕ/ಅಣ್ಣ, ಜಗಳವಾಡಲಿಕ್ಕೆ ತಂಗಿ/ತಮ್ಮ, ಹಬ್ಬದೂಟ, ಬಿಟ್ಟಿ ಕೂಳಿಗೆ ಬರುವ ನೆಂಟರು, ಹುಟ್ಟಿ ಬೆಳೆದ ಊರು, ಚಡ್ಡಿ ದೊಸ್ತಗಳು ಎಲ್ಲಾ ನೆನಪಿಗೆ ಬರಲಿಕ್ಕೆ ಶುರು ಆಗ್ತದೆ. ಇದೆಲ್ಲಾದರು ಮಹತ್ವ ನಮಗೆ ಅದನ್ನು ಕಳೆದುಕೊಳ್ಳುವರೆಗೂ ಗೊತ್ತಾಗುವುದಿಲ್ಲ. ಆದರೆ ಒಮ್ಮೆ ಊರು, ಮನೆ ಬಿಟ್ಟು ಬೇರೆ ಊರಿಗೆ ಬಂದಾಗ ನೆನಪಾಗಿ ಕಾಡಲಿಕ್ಕೆ ಶುರು ಮಾಡ್ತದೆ.

ಅಮ್ಮನ ಬಗೆ ಬಗೆಯ ಊಟ ತಿಂದು ಅಭ್ಯಾಸ ಇರೋದ್ರಿಂದ, ಹಾಸ್ಟೆಲ್ ಊಟ ಒಳಗೆ ನೂಕಿದರು ಹೊರಗೆ ಬರ್ತಿರುತ್ತೆ. ಕಾಲೇಜ್ ಕ್ಯಾಂಟೀನ್ನಲ್ಲಿ ಒಂದು ಕಾಫಿ ಕೇಳಿದರೆ ಅರ್ದ ಕೊಡ್ತಾರೆ, ಅದರಲ್ಲಿ ಬಯ್/ಟು ಮಾಡಿಕೊಂಡು ಕುಡಿಯೋದು. ಹೋಟೆಲ್/ಹಾಸ್ಟೆಲ್ ಊಟ ತಿಂದು ತಿಂದು, ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡು ಮುಂದೆ ಬರಲಿಕ್ಕೆ ಶುರು ಮಾಡ್ತದೆ.

ಒಂದು ಚಿಕ್ಕ ಜ್ವರ ಅಥವಾ ತಲೆ ನೋವು ಬಂದಾಗ, ಹಾಸಿಗೆ ಹಾಸಿ ಮಲಗಿಸಲಿಕ್ಕೆ ಅಪ್ಪ ಇರಲ್ಲಾ, ರೋಗ ಗುಣಮುಖವಾಗಲಿಕ್ಕೆ ಬೇಕಾದ ಆಡುಗೆ ಮಡಿ ತಿನ್ನಸಲಿಕ್ಕೆ ಅಮ್ಮ ಇರಲ್ಲಾ, ಮಾತ್ರೆಗಳನ್ನು ಬಿಸಿ ನೀರಿನೊಂದಿಗೆ ಮರೆಯದೆ ಕೊಡಲಿಕ್ಕೆ ಅಕ್ಕ/ತಂಗಿ ಇರೋದಿಲ್ಲ. ಒಂದೆರಡು ದಿನಗಳಲಿ ಬಿಟ್ಟು ಹೋಗಬೇಕಾದ ಜ್ವರ, ಶೀತ, ತಲೆನೋವು ವಾರಗಟ್ಟಲೆ ತೊಂದರೆ ಕೊಡಲಿಕ್ಕೆ ಶುರು ಮಾಡುತ್ತವೆ. ಎಸ್ಟೇ ಕಷ್ಟ ಇದ್ದರು ನಾವೇ ಆಸ್ಪತ್ರೆಗೆ ಹೋಗಬೇಕು, ಹೋಟೆಲ್ ಹುಡಿಕಿಕೊಂಡು ಹೋಗಿ, ತಂಗಳು ಕೊಟ್ಟರು ತಿಂದು, ಮರೆಯದೆ ಮಾತ್ರೆ ನುಂಗಿ, ಬಂದು ಹಾಸಿಗೆ ಹಾಸಿಕೊಂಡು ಮಲಗಬೇಕು. ಇದನ್ನೆಲ್ಲಾ ಕಷ್ಟ ಪಟ್ಟು ಮಾಡಬಹುದು, ಕೆಲವೊಮ್ಮೆ ಸ್ನೇಹಿತರು ಕೂಡ ತುಂಬಾ ಸಹಾಯ ಮಾಡುತ್ತಾರೆ. ಆದರೆ ತನ್ನ ನೋವನ್ನು ಕೇಳಲಿಕ್ಕೆ ಯಾರು ಕೂಡ ಇರೋದಿಲ್ಲ. ಮನೆಯಲ್ಲಾದರೆ ಅಮ್ಮನ ಕೂಗಿ ಹೇಳಿದರೆ ಸಾಕು, ಏನೂ ಮಾಡದಿದ್ದರೂ ಹತ್ತಿರ ಬಂದು ಪ್ರೀತಿಯಿಂದ ತಲೆ ನೇವರಿಸುತ್ತಾ " ಏನಾಗ್ತಿದಿಯೋ ಪುಟ್ಟ" ಅಂಥ ಕೇಳಿದ್ರೆ ಸಾಕು ಏನೇ ಜ್ವರ ಇದ್ರೂ ಓಡಿ ಹೋಗಿರುತ್ತೆ. ಅಕ್ಕ/ತಂಗಿ ಬಂದು ಪಕ್ಕ ಕುಳಿತು ಮತಾಡಿಸುತಿದ್ದರೆ ಜ್ವರ ಇರುವುದೇ ಮರೆತು ಹೋಗಿರುತ್ತೆ. ಆದರೆ ಹಾಸ್ಟೆಲ್ ರೂಮ್ನಲ್ಲಿ ಕೂತು ಒಬ್ಬನೇ ಕೊರಗಬೇಕೆ ಹೊರೆತು, ಕೇಳಲಿಕ್ಕೆ ಯಾರು ಇರುವುದಿಲ್ಲ.

ಶನಿವಾರ/ಭಾನುವಾರ ಬಂತೆಂದರೆ ಸಾಕು ಬಟ್ಟೆಗಳನ್ನು ತೊಳೆಯೋದು ಒಂದು ದೊಡ್ಡ ಚಿಂತೆ. ಬಟ್ಟೆಗಳನ್ನು ತೊಳೆದುಕೊಳ್ಳುವುದಕ್ಕೆ ಕುಳಿತಾಗ ಅಮ್ಮನ ನೆನಪಾಗದೆ ಇರುವುದಕ್ಕೆ ಸಾದ್ಯನೇ ಇಲ್ಲ, ಅದಕ್ಕೆ "ಜೀನ್ಸ್ ಪ್ಯಾಂಟ್"ಗಳನ್ನೂ ತಗೊಂಡು ತಿಂಗಳಿಗೊಮ್ಮೆ ತೊಳೆಯುವ ಅಭ್ಯಾಸ ನಮಗೆ ಗೊತ್ತಿಲ್ಲದೆ ರೂಡಿಯಾಗಿ ಬಿಡುತ್ತೆ. ಶರ್ಟ್ ಗಳನ್ನೆಲ್ಲ ತೊಳೆದು, ಇಸ್ತ್ರಿ ಮಾಡಲು ಕಷ್ಟ ಆಗಿ, ಇಸ್ತ್ರಿನೇ ಬೇಕಾಗಿಲ್ಲದ ಟಿ-ಶರ್ಟ್ ಹಾಕಲಿಕ್ಕೆ ಶುರು ಮಾಡೋದು. ಇದನ್ನು ನೆಪಕ್ಕೆ "ಟ್ರೆಂಡ್" ಅಥವಾ "ಫ್ಯಾಷನ್" ಎಂದು ಹೇಳಲಿಕ್ಕೆ ಶುರು ಮಾಡೋದು.

ಪ್ರೊಫೆಸರ್ ಗಳು ಉಪನ್ಯಾಸ ಮಾಡುತ್ತಿರುವಾಗ ಕೈಯಿಂದ ಕಣ್ಣುಗಳನ್ನು ತೆರೆಯಲಿಕ್ಕೆ ಪ್ರಯತ್ನ ಮಾಡಿದಸ್ಟು ಜೋರಾಗಿ ಮುಚ್ಚಿಕೊಳ್ಳುತ್ತವೆ.ಒಂದರಿಂದೆ ಒಂದು "internals/exam" ಬರುತ್ತೆ, ಅದರಲ್ಲಿ "average" ತೆಗೆಲಿಕ್ಕೆ ಪಡುವ ಕಷ್ಟ ಏಳಲಿಕ್ಕೆ ತೀರದು. internals/ lab-exam ನಲ್ಲಿ ಒಳ್ಳೆ ಅಂಕ ಕೊಡಲಿ ಅನ್ನೋ ಆಸೆಗೆ ಮುಟ್ಟಾಳ ಉಪನ್ಯಾಸಕರಿಗೆಲ್ಲ "ಬಕೆಟ್" ಹಿಡಿಯುವ ಕೆಲಸ ಮಾಡಲೇಬೇಕು. ಜೊತೆಗೆ "campus selection" ಅನ್ನೋ ಪೆಡಂಬೂತ ಬಂದು ಕೆಲಸದ ಬಗ್ಗೆ ಚಿಂತೆ ಮಾಡುವ ಹಾಗೆ ಮಾಡ್ತದೆ.

ಅಸ್ಟೋಂದೆಲ್ಲಾ "miss" ಮಾಡ್ಕೊಂಡು, ಕಷ್ಟ ಪಟ್ಟು ಮಾಡೋ ಜೀವನಕ್ಕೆ "Golden Life" ಅಂತಾರೆ, ಇದು ಸರೀನಾ? ನೀವೇ ಹೇಳಿ..

Friday, August 21, 2009

ಕನ್ನಡವನ್ನು ಮರೆತು ಹೊಗುತಿದ್ದೇನಾ?

ನಿಜ ಹೇಳಬೇಕು ಅಂದ್ರೆ ನಂಗೆ ನೆಟ್ಟಗೆ ಬರೋದು ಒಂದೇ ಒಂದು ಭಾಷೆ, ಅದು ಕನ್ನಡ. ಅಲ್ಪ ಸ್ವಲ್ಪ ಅಂಗ್ಲ ಮತ್ತು ಹಿಂದಿ ಭಾಷೆಗಳು ಬರುತ್ತವೆ, ಆದರೆ ನಿರರ್ಗಳವಾಗಿ ಮಾತನಾಡಲಿಕ್ಕೆ ಬರೋದು ಕನ್ನಡದಲ್ಲಿ ಮಾತ್ರ. ಕಾರಣ ಅದು ನನ್ನ ಮಾತೃ ಭಾಷೆ, ನನ್ನ ಅಪ್ಪ ಅಮ್ಮ ಕಲಿಸಿದ ಭಾಷೆ.

ಆದರೆ, ಕನ್ನಡದಲ್ಲಿ ಏನಾದರು ಬರೆದು ಕೆಲವು ವರ್ಷಗಳೇ ಆಗಿ ಹೋದವು, ಎಸ್ ಎಸ್ ಎಲ್ ಸಿ ಮುಗಿದ ಮೇಲಂತೂ ಕನ್ನಡದಲ್ಲಿ ಬರೆಯುವ ಅಬ್ಯಾಸವೇ ನಿಂತು ಹೋಗಿದೆ. ಈಗ ಏನಾದರು ಬರೆಯಲು ಪ್ರಯತ್ನ ಮಾಡಿದರೆ ತುಂಬಾ ತಪ್ಪುಗಳು ಆಗುತ್ತಿವೆ, ಈಗ ಬರೆದ ಎರಡು ಸಾಲಿನಲ್ಲೇ ತುಂಬಾ ತಪ್ಪುಗಳು ಇದೆ ಅಂಥ ಗೊತ್ತು, ಇದನ್ನೆಲ್ಲಾ ಸರಿ ಮಾಡಿಕೊಳ್ಳಲೆಂದೇ ಈ ಬ್ಲಾಗ್ ಶುರು ಮಾಡಿದ್ದೇನೆ, ನೋಡುವ ಎಷ್ಟರ ಮಟ್ಟಿಗೆ ಈ ಪ್ರಯತ್ನದಲ್ಲಿ ಜಯ ಸಿಗ್ತದೆ ಅಂಥ.

ಆದರೆ, ದೇವರಾಣೆ ಏನು ಬರೆಯಬೇಕು ಅಂಥ ಮಾತ್ರ ಗೊತ್ತಿಲ್ಲ. ನನ್ನ ಜೀವನದ ಕೆಲವು ಘಟನೆಗಳ ಬಗ್ಗೆ ಬರೆಯುತ್ತೇನೆ, ಇಷ್ಟ ಆಗಬಹುದು ಓದಿ ನೋಡಿ, ನನ್ನ ಜೀವನ ತುಂಬಾ ತಿರುವುಗಳಿಂದ ಕೂಡಿದೆ. ಆದರೆ ನಾನು ಮಾಡುವ ಕೆಲಸದಲ್ಲಿ ಬಿಡುವಿನ ಸಮಯ ಸಿಗೋದು ತುಂಬಾ ಕಷ್ಟ (ನಾನೇ ಅಂದುಕೊಂಡಿದ್ದು, ಎಷ್ಟರ ಮಟ್ಟಿಗೆ ಸತ್ಯ ಅಂಥ ಗೊತ್ತಿಲ್ಲ), ಆದರೂ ಸಮಯ ಮಾಡಿಕೊಂಡು ಬರೆಯಲೇ ಬೇಕು ಅಂಥ ನಿರ್ಧಾರ ಮಾಡಿದ್ದೇನೆ.

ಬ್ಲಾಗ್ ರೂಪದಲ್ಲಾದರೂ ಕನ್ನಡವನ್ನು ನನ್ನಲ್ಲಿ ಜೀವಂತವಾಗಿ ಇಟ್ಟಿಕೊಳ್ಳುವ ಪ್ರಯತ್ನ ಮಾಡುತಿದ್ದೇನೆ, ನನ್ನ ಬರವಣಿಗೆಯಲ್ಲಿ ನಿಮಗೇನಾದರೂ ತಪ್ಪು ಕಂಡು ಬಂದಲ್ಲಿ ದಯವಿಟ್ಟು ನನಗೆ ತಿಳಿಸಿ.