Monday, April 18, 2011

ಆರಂಬಕಾರ

ಹಗಲಿರುಳು ನೆರಳುನಿದ್ದೆಯ ಮೆಟ್ಟಿ, ಹೊಟ್ಟೆಬಟ್ಟೆಯ ಕಟ್ಟಿ,
ಸುಖಸನ್ಮಾನಗಳಿಗಾಶಿಸದೆ, ಜಾತಿಮತಗಳ ಭೇದವೆಣಿಸದೆ
ಜಗದೆಲ್ಲರ ಹಸಿವಾಗ್ನಿಯ ತನ್ನ ಬೆವರಿಂದ ನಂದಿಸುವಾತ
ಪರಮಪೂಜ್ಯ ಶ್ರೀಸಾಮಾನ್ಯನಲ್ಲವೆ? ಈ ಅನ್ನಧಾತ;

ಅನ್ಯಜೀವಿಗಳನ್ಯವೆನ್ನದೆ ಬಳಗದೊಳಕೂಡಿ ಬಾಳೊ ಬುದ್ದ
ಕಲ್ಮಣ್ಣಲೂ, ಗಿಡಮರದಲೂ ಪ್ರತ್ಯಕ್ಷ ದೇವರ ಕಾಣೊ ಸಿದ್ದ
ನೇಗಿಲಕೆಲಸದಿ ಕೈಲಾಸವ ಕಾಣೊ ಕರ್ಮಯೋಗಿ
ಭುವಿಯಲುತ್ತಮ ಧರ್ಮಿಷ್ಠನಲ್ಲವೆ? ಈ ನೇಗಿಲಯೋಗಿ;

ನೇಗಿಲಿಡಿದು ಜೀವಂತ ಚಿತ್ತಾರ ಬಿಡಿಸೊ ಭೂಚಿತ್ರಕಾರ
ನಿಸರ್ಗದ ಮಿಡಿತಕ್ಕನುಸಾರ ಉಸಿರಾಡೊ ಹಾಡುಗಾರ
ಕಸದಿಂರಸವ, ಮಣ್ಣಿಂದನ್ನವ ಸೃಷ್ಟಿಸಬಲ್ಲ ಜಾದುಗಾರ
ಗಂಧದೆದೆಯ ಜೀವನಕಲಾವಲ್ಲಭನಲ್ಲವೆ? ಈ ಆರಂಬಕಾರ;

ಹಸಿವಿಗಿಂತ ನರಕಶಿಕ್ಷೆಯಿಲ್ಲ, ಅನ್ನಧಾತನಿಗಿಂತ ಧಾತನಿಲ್ಲ
ಇವನಿಲ್ಲದೆ ಜಗನೆಡೆಯದೊ, ಇವನೆಡೆಗೆ ಭಕ್ತಿ ತೋರೊ;
ಅನ್ನ ನೀಡುವ ಕೈ ಸಣಕಲಾದರೆ, ಜಗವೆ ಬಡಕಲು ತಿಳಿಯೊ
ಇವನಳಿವಲಿ ಮನುಕುಲದಳಿವಡಗಿದೆ, ಇದನರಿತು ಬಾಳೊ;