Wednesday, January 5, 2011

ಕಾದಿರುವೆ ಬಾರೊ ಮಹಾಗುರುವೆ


ಎಲ್ಲಿರುವೆಯೋ ಎನ್ನ ಮಹಾಗುರುವೆ, ಕಾದಿರುವೆ ನಿನಗಾಗಿ
ಮನಸೆಂಬ ಹೋರಿಯ ತಿದ್ದಿ, ಬೇಸಾಯದೆತ್ತು ಮಾಡುಬಾರೊ ರೈತನೆ;
ದಿಕ್ಕೆಟ್ಟು ಕೂತಿರುವೆನ್ನ ಎದೆಯೊಳಗಡಗಿರುವ ಚೈತನ್ಯದೀಪಕೆ
ಜ್ಞಾನದ ಕಿಡಿಯಿಟ್ಟು ಬೆಳಗಿಸಿ, ಚರಮಮುಕ್ತಿಯಡೆಗಟ್ಟುಬಾರೊ ದೇವನೆ;

ಒಳಗಡಗಿರುವ ಸುಂದರಶಿಲೆಯ ಅಲ್ಪಕಲ್ಪನೆಯು ಇಲ್ಲದೆ
ನಶ್ವರಕಾಮನೆಗಳ ದಂಡಿನ ಕಾಲ್ತುಳಿತಕೆ ಸಿಕ್ಕಿ ಸವೆದು
ಚಕಾರವೆತ್ತದೆ ವಿಕಾರವಾಗುತಿರುವೀ ನಿರಾಕಾರ ಬಂಡೆಗೆ
ಜ್ಞಾನದುಳಿಪೆಟ್ಟು ಕೊಟ್ಟು, ವಿರಕ್ತಮೂರ್ತಿಯಾಕಾರ ಕಡೆದು
ಕಾಲಲ್ತುಳಿತಿರುವ ಕಾಮನೆಗಳು ಕೈಮುಗಿವಂತೆ ಮಾಡುಬಾರೊ ಶಿಲ್ಪಿಯೆ!

ದಿಕ್ಕುದೆಸೆಯಿಲ್ಲದೆ ತೆವಳುತಿರುವೀ ಸಂಸಾರಸಾಗರದಲಿ
ಸರ್ವೆಂದ್ರಿಯಗಳ ಎಂದೂ ಮುಗಿಯದ ಮೋಹದಲೆಗಳು
ಮೇಲೆತ್ತುವಂತೆ ತೋರಿ, ಸಂಪೂರ್ಣ ಮುಳಿಗಿಸಿ
ಈಜಿ ಮರಳಲಾಗದ ತೀರಕೆ ಸೆಳೆದೊಯ್ಯುವ ಮುನ್ನ
ಆಪತ್ ಭಾಂಧವನಾಗಿ ಬಂದು, ಬಿಡಿಸಿ ಎಳೆದೊಯ್ಯುಬಾರೊ ಅಂಬಿಗ!

ಋಷಿಯ ದನಿಯಾಗಿ ಬಾರೊ, ಗುಡಿಯ ಕಲ್ಲಾಗಿ ಬಾರೊ,
ಕಬ್ಬದ ರಸವಾಗಿ ಬಾರೊ, ಕಥೆಯ ಪಾತ್ರವಾಗಿ ಬಾರೊ,
ಹಸಿವ ನೋವಾಗಿ ಬಾರೊ, ಬೇಸವ ಬಾಂಧವ್ಯವಾಗಿ ಬಾರೊ,
ಸದ್ಯ ಹೇಗಾದರೂ ಬಾರೊ, ಬರದೆ ಮಾತ್ರ ಕಾಡಿಸಬೇಡ;
ದಾಕ್ಷಿಣ್ಯನೆರೆಯಲಿ ಕೊಚ್ಚಿಹೋಗುತಿರುವೆನಗೆ ಭಾವದಾಸರೆಯಾಗಿ
ಗೊಂದಲಗದ್ದೆಯಿಂದ ಎದ್ದೇಳಲು ನಿನ್ನ ತೋಳ್ಗಳ ನೀಡುಬಾರೊ ತೆತ್ತಿಗ!