Wednesday, June 29, 2011

ತಾಯ್ ಗೂಡು


ಏನು ಹರುಷವೂ ತೆರಳಲು ಚೆಲುವ ತಾಯ್ ಗೂಡಿಗೆ
 ಸದಾ ಕೈ ಬೀಸಿ ಕರೆವ ಚಿರಯೌವ್ವನ ಬೀಡಿಗೆ
ಎಂಥಾ ಸೊಗಸು ನಾಹುಟ್ಟಿ ಬಲಿತ ತಾಯ್ ಒಡಲು
ಮನವು ಗರಿ ಬಿಚ್ಚಿ ನವಿರಾಗಿ ಕುಣಿಯುವ ಬೃಂದಾವನ
ಎಣೆ ಯಾವುದು ಈ ಪುಟ್ಟ ಸೌಂದರ್ಯ ರತ್ನದ ಗಣಿಗೆ
ನೇಗಿಲಯೋಗಿ ಜಗದ್ ಏಳ್ಗೆಗೆ ಜಪಗೈವ ತಪೋಭೂಮಿಗೆ

ಚೋಳ ಚಾಲುಕ್ಯರ ಅಟ್ಟಹಾಸದ ಬುಡಮುರಿದು
ವೀರಕನ್ನಡಿಗರು ನೆತ್ತರು ಚೆಲ್ಲಿ ಕಟ್ಟಿದ ಹೊಯ್ಸಳನಾಡು;
ಹಲ್ಮಿಡಿ ಶಾಸನವಿರುವ ಕನ್ನಡಾಂಬೆಯ ಹಳೇಬೀಡು;
ಸಮರಗೀತೆಯೊಳಗೂ ಅಹಿಂಸಾ ತತ್ವ ಸಾರಿದ ನಾಡು;
ನಾಟ್ಯಮಯೂರಿ ಚೆಲುವರಾಣಿ ಶಾಂತಲೆಯ ತವರೂರು;
ಶಿಲ್ಪಕಲೆಯ ರಸಋಷಿ ಜಕ್ಕಣ್ಣ ಚಿರಾಯುವಾಗಿಸಿದೂರು;

ಆ ತಾಯ್ ಒಡಲಲಿ... 
ಮುಂಜಾನೆ ಬೆಳಕಲಿ ತಳಿರ ಮೇಲಿನ ಇಬ್ಬನಿ ಹೀರಿ
ತೋಟಗದ್ದೆ ಕಾಡುಗುಡ್ಡಗಳ ಅಲೆದಲೆದು ಮನವ ತಣಿಸಿ
ಕೋಗಿಲೆಗಳ ಸುಮಧುರ ಗಾನ ಕೇಳಿ ನನ್ನನ್ನೇ ಮರೆತು
ಯಾರು ಕಾಣದ ಕಾಡಲಿ ನವಿಲಿನೊಡಗೂಡಿ ಕುಣಿದು
ಸೊಂಪಾದ ಹೊಂಗೆ ಮರದಡಿ ಮಲಗಿ ಹಗಲುಗನಸ ಕಾಣುವಾಗ
ಇಲ್ಲಿ ಬಾ ಸ್ವರ್ಗಕೆ ಮೂರೇ ಗೇಣು ಎಂದರೆ ನಾ ಒಲ್ಲೆ ಎನ್ನುವೆ!


ಆ ತಾಯ್ ಗೂಡಲಿ...
ಅವ್ವನ ಆರೈಕೆಯ ಆಗರದ ಮಡಿಲಲ್ಲಿ ಚಿರಮಗುವಾಗಿ ಮಲಗಿ
ಅಪ್ಪನ ಪ್ರೀತಿಯ ಬೈಗುಳದ ಬೆಟ್ಟದ ತುದಿಯಲಿ ನಿಂತು ನಕ್ಕು
ಸಹೋದರರ ಸಕ್ಕರೆಯ ನುಡಿಗಳ ಸವಿದು ಸವಿದು ಬೀಗಿ
ಬಂಧುಬಾಂಧವರ ಹೊಗಳಿಕೆಯ ಕದ್ದಾಲಿಸಿ ಹಿರಿಹಿರಿ ಹಿಗ್ಗಿ
ವಿದಾಯದ ಸಮಯ ಸನಿಹವಾದಾಗ ಕಾರಣವಿಲ್ಲದೆ ಕುಗ್ಗಿದರೂ
ಹೊಟ್ಟೆ ಹಸಿದಷ್ಟು ಬಾಯಿಗೆ ರುಚಿಯೆಂದು ಸಂತೈಸಿಕೊಂಡು ಮಾಗುವೆ!