Sunday, August 28, 2011

ಹೀಗೇಕೆ?

ಕೆರೆಯ ಶುದ್ದ ನೀರಿಗೆ ಎಳೆದೊಯ್ಯಲು ಬಂದರೂ
ಗದ್ದೆಸಾಲಿನ ಕೆಸರಲಿ ಬಿದ್ದು ಒದ್ದಾಡುವ ಹಠವೇಕೆ ಮನವೆ?
ಗೋಮಾಳದಿ ಹುಲುಸಾದ ಹುಲ್ಲು ಮೇಯಲು ಬಿಟ್ಟರೂ
ಹೊಲದ ಪೈರು ತಿನ್ನಲು ಬೇಲಿಹಾರಿ ಓಡುವೆಯೇಕೆ ಮನವೆ?
ಬಿಸಿಬಿಸಿಯ ಕೂಳು ಬೇಯಿಸಿ ತಂದು ಹಾಕಿದರೂ
ಮಲದ ವಾಸನೆಯಿಡಿದು ಮೂಸುತ ತೆರಳುವೆಯಾಕೆ ಮನವೆ?
ತುಂಬಿದ ಕೆರೆಯಲಿ ಕೊರತೆಯಿಲ್ಲದೆ ಬದುಕುತಿದ್ದರೂ
ಸಣ್ಣ ಹಳ್ಳದ ಜಾಡು ಹಿಡಿದು ಈಜುವ ಹುಂಬತನವೇಕೆ ಮನವೆ?
ನಾಳೆಯ ಬೆಳಕಿನ ಮೇಲೆ ನೆಚ್ಚಿಕೆಯಿಡುವುದ ಬಿಟ್ಟು
ಬೆಂಕಿಯ ಮೋಹಕಿಂದು ರಾತ್ರಿಯೆ ತುತ್ತಾಗಿ ಸಾಯುವೆಯೇಕೆ ಮನವೆ?

ನಿನ್ನ ಕಣ್ಣೆದುರಿಗಿರುವ ಸಕಲ ಭಾಗ್ಯವ ಬದಿಗೊತ್ತಿ
ಇನ್ನೂ ತೆರೆಯದಿರ ಬಾಗಿಲ ಕಡೆಗೇ ಸೆಳೆಯುವೆಯೇಕೆ ಮನವೆ?
ದಾಕ್ಷಿಣ್ಯವೆ ದಾರಿದ್ರ್ಯಕೆ ದಾರಿಯೆಂದು ಅರಿವಿದ್ದರೂ
ಬೇಡದ ಬೇಳೆಯ ಬಿಡದೆ ಬೇಯಿಸುವ ಕಾಯಕವೇಕೆ ನಿನಗೆ?
ವಿಚಾರಕದಗಳೇ ಇಲ್ಲದ ಬರೀ ಆಚಾರಮನೆ ಕಟ್ಟಿ
ಅದರೊಳಗೆ ಮರಳಿ ಏಳಲಾರದಂತೆ ಮಲಗುವುದು ನೆಲೆಯೆ?
ಕಂದಕದಿಂದ ಮೇಲೇಳಲು ಸಿಕ್ಕಿರುವ ಕಣ್ಣಿಯ ಬಿಟ್ಟು
ಕಾಣದ ಕಲ್ಲು ದೇವರ ಪವಾಡಕೆ ಕಾದು ಕೊರಗುವುದು ಸರಿಯೆ?
ಭೋರ್ಗೆರೆಯುತ ಆರ್ಭಟಿಸಿ ಬರುವ ಯೋಚನಾಗಜಗಳ
ಪಳಗಿಸುವ ಅರಿವಿನ ಗಜಶಾಲೆಯ ಮಾವುತನಾಗುವುದೆಂದು ಮನವೆ?