Wednesday, December 1, 2010

ಮಜ್ಜನ

ಓ ಮನವೆ, ಆಜನ್ಮಕಾಲ ನಖಶಿಖಾಂತ ಅಂಟಿರುವ ಕೊಳೆ
ಕೊಳೆತು ನಾರುವ ಮುನ್ನವೆಚ್ಚೆತ್ತು ಕೊಚ್ಚಿ ತೊಳೆದುಬಿಡು!
ಬಾಳಲಿ ಒಮ್ಮೆಯಾದರೂ ಜ್ಞಾನಮಜ್ಜನಗ್ಯೆದು ಮಡಿಯಾಗಿ
ಚೇತನಕಾಂತಿಗೆ ಕವಿದಿರುವ ಜಡತೆಯ ಜವನಿಕೆ ಸರಿಸಿಬಿಡು!  
ಕಂಡ ಕಂಡ ಕಲ್ ದೇವೆರಿಗೆ ಮರುಳುಕಿಂಕರನಾಗುವುದ ಬಿಟ್ಟು
ದೇವರದೇವನಾದ ಅಂತರಾತ್ಮನಿಂದಾ ಸತ್ಯದೀಕ್ಷೆ ಪಡೆದುಬಿಡು!

ದುರ್ವಿಚಾರಭರಿತ ಆಚಾರಗಳ ಗ್ರಹಣದ ಮಬ್ಬಲಿ
ಹಿರಿಯರು ಅರಿಯದೆ ಹಣೆಗಿಟ್ಟ ಮೌಡ್ಯತೆಯ ಮಸಿ!
ಯೌವನದ ಮರೆಯಲಿ, ವೇಷಗಳ ಸ್ಮಶಾನದಲಿ
ಬೆತ್ತಲಾಗಿ ಬಣ್ಣ ಬಳಿದುಕೊಳ್ಳುವಾಗಂಟಿದ ಬೂದಿ!
ಕೊಳೆಗಳೆಲ್ಲ ಕೊಳೆತು ಚಿತ್ತವೊಂದು ಗೆದ್ದಲು ಹಿಡಿದ ಹುತ್ತವಾಗಿ
ವಿಷಸರ್ಪಗಳು ಬಂದು ಸೇರುವ ಮುನ್ನ ಉಜ್ಜಿ ತೊಳೆದುಬಿಡು!

ಕಾಣುವ ಕಂಗಳಲ್ ಕುರುಡುಕಾಮದ ಪಿಸರು;
ಕೇಳುವ ಕಿವಿಗಳಲ್ ಕಿವುಡಾದರ್ಶಗಳ ಗುಗ್ಗೆ;
ನುಡಿಯುವ ನಾಲಿಗೆಯಲ್ ಅನಾಚಾರದ ಪಾಚಿ;
ತೋರುವ ಮೊಗದಲ್ ದುರಹಂಕಾರದ ದೂಳು;
ಈಗೆ, ಜ್ಞಾನಸುಧೆ ಒಳಹೊರ ಹರಿವ ಕಾಲುವೆಗಳೆಲ್ಲ ಕಲ್ಮಶಗೊಂಡು
ಗುಂಡಿಗೆಯು ಕೊಳಚೆಗುಂಡಿಯಾಗುವ ಮುನ್ನ ಕೊಚ್ಚಿ ತೊಳೆದುಬಿಡು!