Friday, September 17, 2010

ಪ್ರೇಮೋದಯ



ಎದೆಬಡಿತದ ಗತಿಯೇಕೋ ಇಂದು ಮಿತಿಮೀರುತಿದೆ
ಬರಡು ಬಾಳಲಿ ಒಲವಿನ ಸುರಿಮಳೆಯಾಗುವ ಮುನ್ಸೂಚನೆಗೊ?
ಇಷ್ಟು ದಿವಸ ಮಾಡಿದ ಪ್ರೀತಿಯ ಜಪತಪಗಳ ಮೋಡಿಗೆ
ಮನಸೋತ ಮನದ ಮೆರವಣಿಗೆಯಾಗಮನದ ದಿಕ್ಸೂಚನೆಗೊ?
ನೂರಾರು ಗುರುಗಳಿಂದ ಕಲಿತ ನಾಲ್ಕಾರು ಪದಗಳು ನಿನ್ನ ಕಂಡೊಡನೆ
ಭಾವ ಹೊತ್ತು, ಸಾಲಾಗಿ ನಿಂತು, ಕಟ್ಟುವ ಗೀತಗರ್ಭದ ಶುಭಸೂಚನೆಗೊ?

ತನುವಿಗೆ ವಯ್ಯಾರದ ಸೀರೆಯುಟ್ಟು, ಎದೆಗೆ ಒಲವಾಭರಣ ತೊಟ್ಟು,
ಮೋರೆಗೆ ಲಜ್ಜೆಯಲಂಕಾರ ಮಾಡಿ ಪ್ರತಿರಾತ್ರಿ ಕನಸಲಿ ಕಾಡುವ ಕನ್ನಿಕೆಯೇ
ಸ್ವಪ್ನಮೇಘಮಾಲೆ ಹಿಡಿದು ಕಾದಿರುವೆ, ಸುರಿಸಲು ಒಲವಿನ ಜಡಿಮಳೆ
ತಣಿಯಲು ತಯಾರಿ ಮಾಡಿಕೊ, ಅನುರಾಗದ ಬೊಗಸೆಯೊಡ್ಡಿ;
ಮುಟ್ಟಿದರೆ ಸಾಕು ಮುಟ್ಟಾಗದ ತುಂಬು ಮೊಗ್ಗು ನೀನು; 
ಮುಟ್ಟದಯೆ ಪರಾಗಸ್ಪರ್ಶ ಮಾಡಬಲ್ಲ ತುಂಟ ದುಂಬಿ ನಾನು; 

ನಡೆಯುತಿರೆ ನಿನ್ನ ಸಂಗಡ, ಮುಸ್ಸಂಜೆ ಹೊತ್ತಿನಲಿ
ಪಿಸುಮಾತಿನ ಸುಳಿವು ನೀಡಿ ಸೆಳೆಯುತಿರುವೆ ಸನಿಹಕೆ;
ನಿನ್ನ ನಡುವೇರಿ ಕುಳಿತಿದೆ ಈ ನನ್ನ ಕೈ ಕೇಳದೆ ಯಾರ ಮಾತು
ಕೇಳದೇನೆ ಹಾಕಿರುವೆ ಒಪ್ಪಿಗೆಯ ಸಹಿ, ನೀನೂ ಹುಸಿಗೋಪದಲಿ;
ಸಂಜೆ ತಂಗಾಳಿಯ ಮಾತು ಕೇಳಿದ ನಿನ್ನಯ ನೀಳ ಕೇಶರಾಶಿ
ನನ್ನಯ ಕೆನ್ನೆಗೆ ಚುಂಬಿಸಿ, ಕಂಪಿನ ಮತ್ತೇರಿಸಿ, ಮಾತನ್ನೆ ಮರೆಸಿದೆ;

ಕುಳಿತಿರೆ ನಿನ್ನ ಸನಿಹದಲಿ, ಸಾಗರದ ತೀರದಲಿ
ಬಾರದು ಎಂದೂ ಅಭಾವ ಈ ಕವಿ ಕಲ್ಪನೆಯ ಮೇವಿಗೆ
ತೀರದು ಮೂಕಮನಗಳ ನಯನ ಸಂಭಾಷಣೆಯ ದಾಹ;
ನಮ್ಮ ಪ್ರೇಮೋದಯವ ಕಂಡ ಆ ದಿನಕರನು  
ಕರುಬಿ ಕಿಚ್ಚಿನ ಕೆಂಡ ಕಾರಿ ಮುಗಿಲನೆ ಕೆಂಪೇರಿಸುತಿಹನು
ಜೋರಾಗಿ ಜಾರುತಿಹನು ಮುಳುಗಿ ಮರೆಯಾಗಲು;