ನನ್ನ ಕವಿತೆಗಳ ಕಾರಣ ನೀನು
ನನ್ನ ಕವಿತೆಗಳ ಹೂರಣ ನೀನು
ನಾನು ಅಟ್ಟು ಎಡೆಯಿಟ್ಟ ಕವಿತೆಗಳ
ಅರ್ಪಿಸಿಕೊಳ್ಳೋ ಜಗದೇಕದೇವಿ ನೀನು
ನೀನಾಗೆ ನನ್ನಿಂದ ದೂರಾದ ನಂತರ
ನನ್ನ ಕವಿತೆಗಳೆಲ್ಲ ಶವಾಗಾರದ ತೋರಣ!
ಕಾಣದ ಕನಸನು ಕಣ್ಣಿಗೆ ತೋರಿಸಿ
ಬಣ್ಣದ ಭಾವನೆಗಳ ಮಳೆ ಸುರಿಸಿ
ಬೇಡದ ಬಯಕೆಗಳ ಬಡಿದೆಬ್ಬಿಸಿ
ಬಿಸಿಯುಸಿರಲೆ ನಶೆಯ ಮೈಗೇರಿಸಿ
ಮದವೇರಿದ ಮನದ ಮದವಡಗಿಸದೆ
ಬದುಕನೆ ಲೂಟಿ ಮಾಡಲು ಬಿಟ್ಟು ಹೋದೆಯಾ?
ನನ್ನೆದೆ ಹೊಲವ ಒಪ್ಪ ಮಾಡಿ
ಹದನೋಡಿ ಒಲವ ಬೀಜ ಬಿತ್ತಿ
ಒಂದೊಳ್ಳೆ ಪ್ರೀತಿಯ ಹೂವ ಬೆಳೆದು
ಮುಡಿಗೆ ಮುಡಿಯದೇ ಮರೆಯಾದೆ
ಅರಳಿ ನಿಂತ ಹೂವ ನಾನೇನ ಮಾಡಲಿ?
ಯಾವ ಕಲ್ಲು ದೇವರಿಗೆ ಬಲಿಯಾಗಿ ನೀಡಲಿ?